ಧೋನಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
ನವದೆಹಲಿ, ಆ. 04 : ಭಾರತೀಯ ಕ್ರಿಕೆಟ್ ನ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾವಲಯದ ಪ್ರತಿಷ್ಠಿತ ರಾಜೀವ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧೋನಿ ಅವರು ಭಾರತೀಯ ಕ್ರಿಕೆಟ್ ನೀಡಿರುವ ಅನುಪಮ ಸೇವೆಯನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. ಈ ಅತ್ಯುನ್ನತ ಪ್ರಶಸ್ತಿ ಪಡೆದ ಎರಡನೇ ಕ್ರಿಕೆಟ್ ಪಟು ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. 1997-98ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್ ಈ ಪ್ರಶಸ್ತಿ ಪಡೆದಿದ್ದರು.
ಜಾರ್ಖಂಡ್ ಸ್ಫೋಟಕ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಮಿನುಗುವ ನಕ್ಷತ್ರ ಎಂದರೆ ತಪ್ಪಾಗಲಾರದು. 2007 ರ ಉನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಖೇಲ್ ರತ್ನಕ್ಕೆ ಬಿಸಿಸಿಐ ಸಮಿತಿಯಿಂದಲೇ ಇವರ ಹೆಸರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ರವಾನಿಸಲಾಗಿತ್ತು ಎಂದು ಬಿಸಿಸಿಐ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ತಿಳಿಸಿದ್ದಾರೆ. ಆ.29 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅವರು ಹೇಳಿದರು.
ಕಳೆದ ವರ್ಷ ದಕ್ಷಿಣ ಆಫ್ರಿಕದಲ್ಲಿ ನಡೆದ ಟ್ವಂಟಿ-20 ವಿಶ್ವಕಪ್ ಪಂದ್ಯಾವಳಿ ಧೋನಿ ನೇತೃತ್ವದ ತಂಡ ಅಮೋಘ ಪ್ರದರ್ಶನ ನೀಡಿ ವಿಶ್ಪಕಪ್ ಗೆದ್ದುಕೊಂಡು ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ವಿಶ್ವನಾಥನ್ ಆನಂದ(ಚೆಸ್), ಗೀತ ಸೇಥಿ(ಬಿಲಿಯರ್ಡ್ಸ್), ಕೆ.ಮಲ್ಲೇಶ್ವರಿ(ವೆಟ್ ಲಿಪ್ಟಿಂಗ್), ಲಿಯಾಂಡರ್ ಪೇಸ್(ಟೆನ್ನಿಸ್), ಎನ್.ಕುಂಜುರಾಣಿ(ವೆಟ್ ಲಿಫ್ಟಿಂಗ್), ಜ್ಯೋತಿರ್ಮಯಿ ಸಿಕ್ಧರ್(ಅಥ್ಲೇಟಿಕ್ಸ್), ಪಿ. ಗೋಪಿಚಂದ್(ಬ್ಯಾಡ್ಮಿಂಟನ್), ಅಭಿನವ್ ಬಿಂದ್ರಾ(ಶೂಟಿಂಗ್), ಧನರಾಜ್ ಪಿಳ್ಳೆ(ಹಾಕಿ), ಅಂಜು ಬಾಬಿ ಜಾರ್ಜ್(ಅಥ್ಲೇಟಿಕ್ಸ್), ರಾಜವರ್ಧನ್ ಸಿಂಗ್ ರಾಥೋರ್(ಶೂಟಿಂಗ್), ಅಂಜಲಿ ಭಗತ್(ಶೂಟಿಂಗ್), ಪಂಕಜ್ ಅಡ್ವಾಣಿ(ಬಿಲಿಯರ್ಡ್ಸ್, ಸ್ನೂಕರ್), ಮಾನವಜೀತ್ ಸಿಂಗ್(ಶೂಟಿಂಗ್) ಪ್ರಶಸ್ತಿ ಪಡೆದುಕೊಂಡ ಇತರ ಕ್ರೀಡಾಪಟುಗಳಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬೌಲರ್ಗಳ ಪರಾಕ್ರಮಕ್ಕೆ ತತ್ತರಿಸಿದ ಶ್ರೀಲಂಕಾ