ಅಫ್ಘಾನಿಸ್ತಾನ ಅಧ್ಯಕ್ಷರ ಜತೆ ಪ್ರಧಾನಿ ಮಾತುಕತೆ
ನವದೆಹಲಿ, ಆ. 04 : ಎರಡು ದಿನಗಳ ಭಾರತದ ಪ್ರವಾಸ ಕೈಗೊಂಡಿರುವ ಅಪಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ ಭಾನುವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದು, ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರ ದ್ವಿರಾಷ್ಟ್ರಗಳ ಮಹತ್ವದ ಮಾತುಕತೆಯಲ್ಲಿ ಮುಖ್ಯವಾಗಿ ಭಯೋತ್ಪಾದನೆ ಮುಖ್ಯ ಚರ್ಚೆಯ ವಿಷಯವಾಗಿದೆ. ಉಭಯ ದೇಶಗಳು ಎದುರಿಸುತ್ತಿರುವ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳು ಕುರಿತು ಪ್ರಮುಖ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಸಂಜೆ ಭಾರತಕ್ಕೆ ಆಗಮಿಸಿರುವ ಹಮೀದ್ ಕರ್ಜಾಯಿ ಅವರು ಪ್ರತಿಪಕ್ಷದ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಹಾಗೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕೊಲಂಬೋ ನಗರದಲ್ಲಿ ನಡೆದ 15ನೇ ಸಾರ್ಕ್ ಸಮ್ಮೇಳನ ಭಾಗವಹಿಸಿದ್ದ ಅಫ್ಘಾನಿಸ್ತಾನ ದ ಅಧ್ಯಕ್ಷ ಹಮೀದ್ ಕರ್ಜಾಯಿ ಹಾಗೂ ರಕ್ಷಣಾ ಸಲಹೆಗಾರ ಡಾ. ಜುಲ್ಮಾಯಿ ರಸೂಲ್ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಇದು ಅವರು 6ನೇ ಭೇಟಿಯಾಗಿದೆ.
ಮೊನ್ನೆ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಪ್ರಚೋಧಿತ ಉಗ್ರರ ಕೈವಾಡವಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಆದರೆ ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಪ್ರಧಾನಮಂತ್ರಿ ಯೂಸೆಫ್ ಸಯ್ಯದ್ ಗಿಲಾನಿ ಅಮೆರಿಕದ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಭಾರತದೊಂದಿಗೆ ಅಫ್ಘಾನಿಸ್ತಾನದ ಉತ್ತಮ ಬಾಂಧವ್ಯ ಹೊಂದಿರುವುದು ಅಲ್ಲಿನ ಮೂಲಭೂತವಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹಮೀದ್ ಕರ್ಜಾಯಿ ಅವರ ಮೇಲೆ ಕೋಪ ವ್ಯಕ್ತವಾಗಿದೆ. ಹಾಗೆಯೇ ಅಫ್ಘಾನಿಸ್ತಾನ ಉಗ್ರಗಾಮಿ ಸಂಘಟನೆಗಳ ತವರೂರಾಗಿದ್ದು, ಕರ್ಜಾಯಿ ಅವರ ನಡೆಯನ್ನು ಅವರು ಅರಗಿಸಿಕೊಳ್ಳುವುದು ಕಷ್ಟವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಗಡಿ ಉಲ್ಲಂಘನೆ ಮಾಡಿದ ಪಾಕ್ ಯೋಧರಿಂದ ದಾಳಿ
ಸರಣಿ ಸ್ಫೋಟ ಘಟನೆಗೆ ವಿಶ್ವಸಂಸ್ಥೆ ತೀವ್ರ ಖಂಡನೆ












Click it and Unblock the Notifications