ಭುವನೇಶ್ವರದಲ್ಲಿ ಅಕ್ಷಯ ಪಾತ್ರೆಯ ಯಶೋಗಾಥೆ
ಬೆಂಗಳೂರು, ಜು.31: ಅಕ್ಷಯ ಪಾತ್ರೆಯ ಯಶೋಗಾಥೆಯನ್ನೊಳಗೊಂಡ 'ಶೂನ್ಯದಿಂದ ಬಿಲಿಯನ್' ಕಾರ್ಯಕ್ರಮ ಈ ಬಾರಿ ಭುವನೇಶ್ವರದಲ್ಲಿ ನಡೆಯಲಿದೆ. ದೇಶಾದ್ಯಂತ ಇರುವ 9.40 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಅಕ್ಷಯ ಪಾತ್ರೆ ಪ್ರತಿಷ್ಠಾನದ ಈ ಕಾರ್ಯಕ್ರಮವು ಕಳೆದ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಸಂಘ ಸಂಸ್ಥೆಗಳ (ಮಾಧ್ಯಮ, ರಾಜಕೀಯ, ಸಮಾಜ ಸಂಸ್ಥೆಗಳು,ಕಲೆ ಮತ್ತು ಸಂಸ್ಕ್ರತಿ) ಮುಖ್ಯಸ್ಥರು ಹಾಗೂ ನಾಯಕರು ಭಾಗವಹಿಸಿದ್ದರು.
ಅಕ್ಷಯ ಪಾತ್ರೆಯು ದೇಶದ 14 ಸ್ಥಳಗಳಲ್ಲಿರುವ 4,500 ಸರ್ಕಾರ, ಸರ್ಕಾರೇತರ ಶಾಲೆಗಳು, ಅಂಗನವಾಡಿಗಳ ಸುಮಾರು 9.40 ಲಕ್ಷ ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ನೀಡುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯು ಪುರಿಯಲ್ಲಿ 35,000 ವಿದ್ಯಾರ್ಥಿ ಹಾಗೂ ನಾಯಗಾರಿನ 10,500 ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಪ್ರಾರಂಭಿಸಿದೆ. 'ಶೂನ್ಯದಿಂದ ಬಿಲಿಯನ್' ಕಾರ್ಯಕ್ರಮವು ಪ್ರಮುಖ ಕೈಗಾರಿಕಾ ಪ್ರದೇಶವಾದಒರಿಸ್ಸಾದ ಭುವನೇಶ್ವರದಲ್ಲಿರುವ ಹೋಟೆಲ್ ಸ್ವೊಸ್ತಿ ಪ್ಲಾಜಾದಲ್ಲಿ ಆಗಸ್ಟ್ 16, 2008 ರಂದು ನೆರವೇರಲಿದೆ.
2000 ನೇ ಇಸವಿಯಲ್ಲಿ ಪ್ರಾರಂಭವಾದ ಅಕ್ಷಯ ಪಾತ್ರೆಯು ಅಲ್ಪಾವದಿಯಲ್ಲಿಯೇ ಉತ್ತಮ ಸಾಧನೆ ಮಾಡಿದ್ದು, ಅನಿರೀಕ್ಷಿತ ಮಟ್ಟದ ಫಲಿತಾಂಶವನ್ನು ಪಡೆದ ಬಗೆಯನ್ನು ವಿವರಿಸುವುದೇ 'ಶೂನ್ಯದಿಂದ ಬಿಲಿಯನ್'ವರೆಗೆ ಕಾರ್ಯಕ್ರಮದ ಮುಖ್ಯ ಉದ್ದೇಶ. ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಸಾಮಾಜಿಕ ಪಿಡುಗಾದ ಹಸಿವು, ದೇಶದ 57 ದಶಲಕ್ಷ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಿರುವ ಕಲುಷಿತ ಆಹಾರ, ಶಾಲೆಗಳಲ್ಲಿ ಮಕ್ಕಳ ಹಾಜರಿ ಕಡಿಮೆಯಾಗಲು ಕಾರಣ ಮುಂತಾದ ಹಲವು ವಿಷಯಗಳ ಕುರಿತು ಚರ್ಚಿಸಲಾಗುವುದು.
ಈಗಾಗಲೇ ಸರ್ಕಾರಿ ಮತ್ತು ಖಾಸಗಿ ವಲಯಗಳ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಿಸುವುದಾಗಿ ತಿಳಿಸಿದ್ದಾರೆ.ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವ ಚಂದ್ರಶೇಖರ್ ಸಾಹು, ಒರಿಸ್ಸಾ ಸರ್ಕಾರದ ಸಚಿವ ಸೂರ್ಯ ನಾರಾಯಣ ಪಾತ್ರೊ ಮುಂತಾದವರು ಭಾಗವಹಿಸಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications