ಕನ್ನಡಿಗರ ಪರೋಕ್ಷ ಕ್ಷಮೆ ಯಾಚಿಸಿದ ರಜನಿಕಾಂತ್
ಬೆಂಗಳೂರು, ಜು.31:''ತಪ್ಪಾಗಿರುವುದು ಸಹಜ, ಮುಂದೆ ತಪ್ಪಾಗದಂತೆ ನೋಡಿಕೊಳ್ಳುತ್ತೇನೆ. ಮುಂದೆ ತಪ್ಪು ಮಾಡುವುದಿಲ್ಲ. ಕನ್ನಡಿಗರ ಬಗ್ಗೆ ನನಗೆ ಅಪಾರ ಗೌರವ ಇದೆ. ದಯವಿಟ್ಟು ಕುಸೇಲನ್ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು'' ಎಂದು ನಟ ರಜನಿಕಾಂತ್ ಪರೋಕ್ಷವಾಗಿ ಟಿವಿ 9 ಸುದ್ದಿ ವಾಹಿನಿ ಮೂಲಕ ಕ್ಷಮೆ ಕೋರಿದ್ದಾರೆ.
ಹೈದರಾಬಾದ್ನಲ್ಲಿ ಮಾತನಾಡುತ್ತಿದ್ದ ಅವರು, 'ಕನ್ನಡದ ಮಕ್ಕಳಿಂದ ದೊಡ್ಡ ಪಾಠ ಕಲಿತಿದ್ದೇನೆ. ನಾನು ಒದೆಯಿರಿ ಎಂದು ಹೇಳಿದ್ದು ಪುಂಡು ಪೋಕರಿಗಳಿಗೆ, ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ನಾಶ ಮಾಡುವವರಿಗೆ ಹೊರತು ಕನ್ನಡ ಹೋರಾಟಗಾರರನ್ನು ಉದ್ದೇಶಿಸಿ ಅಲ್ಲ. ಒಳ್ಳೆಯವರಿಗೆ ತಲೆಬಾಗುತ್ತೇನೆ. ಪುಂಡುಪೋಕರಿಗಳಿಗೆ ಯಾಕೆ ತಲೆಬಾಗಬೇಕು ಎಂದು ಪ್ರಶ್ನಿಸಿದರು.
ನಾನು ರಾಜಕಾರಣಿ ಖಂಡಿತ ಅಲ್ಲ. ಹೀಗಾಗಿ ಮಾತಾಡುವಾಗ ತಪ್ಪಾಗಿದೆ. ಮುಂದೆ ಮಾತಾಡುವಾಗ ವಿಚಾರಮಾಡಿ ಮಾತನಾಡುತ್ತೇನೆ. ಕನ್ನಡ ಹೋರಾಟಗಾರರಿಗೆ ಏನು ಸಹಾಯ ಬೇಕೋ ಎಲ್ಲ ಮಾಡುತ್ತೇನೆ. ಇಂದು ನಾನು ಸಂತೋಷವಾಗಿದ್ದೇನೆ. ಹಣ, ಹೆಸರು ಎಲ್ಲ ದೊರೆತಿದೆ ಆದರೆ ನಾನು ಕಂಡಕ್ಟರ್ ಆಗಿದ್ದೆ ಎಂಬುದನ್ನು ಇನ್ನೂ ಮರೆತಿಲ್ಲ. ಸುಮಾರು ಜನ ನನ್ನನ್ನು ಅಹಂಕಾರಿ ಎನ್ನುತ್ತಾರೆ. ನಾನು ದುರಂಹಂಕಾರಿ ಖಂಡಿತ ಅಲ್ಲ ಎಂದು ನುಡಿದರು.
ಅವರು ತಮ್ಮ ಮಾತಿನ ಮಧ್ಯೆ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯನಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ವಾಟಾಳ್ ನಾಗರಾಜ್ ಹೆಸರುಗಳನ್ನು ಪ್ರಸ್ತಾಪಿಸಿ ಕನ್ನಡ ಹೋರಾಟಗಾರರೆಲ್ಲರು ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರವೀಣ್ ಕುಮಾರ್ ಶೆಟ್ಟಿ ಇದೊಂದು ಒಳ್ಳೆ ಯ ಬೆಳವಣಿಗೆ, ನಮ್ಮ ಪದಾಧಿಕಾರಿಗಳು ಹಾಗೂ ಗಡಿ ಹೋರಾಟ ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಹಾಗೆಯೇ ಹೊಗೇನಕಲ್ ಕರ್ನಾಟಕದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಯಾವುದೇ ಹೋರಾಟಕ್ಕು ಸಿದ್ಧವಿರುವುದಾಗಿ ಹೇಳಿದರು. ಹಾಗೆಯೇ ರಜನಿಕಾಂತ್ರ ಪರೋಕ್ಷ ಕ್ಷಮೆಯಾಚನೆಯನ್ನು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಪ್ರವೀಣ್ ಶೆಟ್ಟಿ ಬಳಗದ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ, ನಟ ದ್ವಾರಕೀಶ್ ಸ್ವಾಗತಿಸಿದ್ದಾರೆ.
ರಜನಿಕಾಂತ್ ಕನ್ನಡಿಗರ ಪರೋಕ್ಷ ಕೇಳುವ ಮೂಲಕ ಒಟ್ಟಿನಲ್ಲಿ ಕುಸೇಲನ್ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ನಿವಾರಣೆ ಅಗಿದೆ. ಕನ್ನಡ ಪರ ಸಂಘಟನೆಗಳು ತಮ್ಮ ಪದಾಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಹೇಳಿವೆ.(ದಟ್ಸ್ಕನ್ನಡ ವಾರ್ತೆ)