ಕಾವೇರಿ ವಿವಾದ; ನವೆಂಬರ್ನಲ್ಲಿ ಸುಪ್ರೀಂಕೋರ್ಟ್ ತೀರ್ಪು
ನವದೆಹಲಿ, ಜು. 29 : ಕಾವೇರಿ ನ್ಯಾಯಾಧೀಕರಣ ಮಂಡಳಿ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳ ಒಳಗೊಂಡ ಪೀಠಕ್ಕೆ ವರ್ಗಾಯಿಸಲಾಗಿದ್ದು, ನವಂಬರ್ ತಿಂಗಳಲ್ಲಿ ತೀರ್ಪನ್ನು ನೀಡಲಾಗುವುದು ಎಂದು ಸುಪ್ರಿಂಕೋರ್ಟ್ ಹೇಳಿದೆ.
ಕರ್ನಾಟಕ,ತಮಿಳುನಾಡು ಮತ್ತು ಕೇರಳ ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮ್ಮವೇ ಆದ ಕೆಲ ವಾದದೊಂದಿಗೆ ಸುಪ್ರಿಂಕೋರ್ಟ್ ಮೆಟ್ಟಿಲೆರಿದ್ದವು. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆ ಪತ್ರಗಳನ್ನು ಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಲಯ ಸೂಚಿಸಿದೆ. ಸುಪ್ರಿಂಕೋರ್ಟ್ ನ್ಯಾಯಾಲಯದ ಮುಖ್ಯನ್ಯಾಯಾಧೀಶ ಡಾ.ಕೆ.ಜಿ.ಬಾಲಕೃಷ್ಣನ್ ಹಾಗೂ ನ್ಯಾಯಾಧೀಶ ಪಿ.ಸದಾಶಿವಮ್ ನೇತೃತ್ವದ ಪೀಠ ಈ ನಿರ್ಧಾರಕ್ಕೆ ಬಂದಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ತಮಗೆ ಕಾವೇರಿ ನ್ಯಾಯಾಧೀಕರಣ ತೀರ್ಪಿನಿಂದ ಅನ್ಯಾಯವಾಗಿ ಎಂದು ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ ಸಮಗ್ರ ವಿಚಾರಣೆ ನಂತರ ನವಂಬರ್ ತಿಂಗಳಲ್ಲಿ ಅಂತಿಮ ತೀರ್ಪು ನೀಡುವುದಾಗಿ ಹೇಳಿದೆ. ಅದಕ್ಕೂ ಮುಂಚೆ ಆಯಾ ರಾಜ್ಯಗಳು ತಮ್ಮಲ್ಲಿರುವ ಎಲ್ಲ ದಾಖಲೆಗಳನ್ನು ನ್ಯಾಯಲಯಕ್ಕೆ ಒದಗಿಸಬೇಕು ಎಂದು ಆದೇಶ ನೀಡಿದೆ.
2007ರ ಫೆಬ್ರುವರಿ ತಿಂಗಳಲ್ಲಿ ಕಾವೇರಿ ನ್ಯಾಯಾಧೀಕರಣ ಮಂಡಳಿ ನೀಡಿದ ತೀರ್ಪಿನಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾಗಿತ್ತು. ಕರ್ನಾಟಕಕ್ಕೆ ಬರೀ 270 ಟಿಎಂಸಿ ನೀರು ಒದಗಿಸುವುದಾಗಿ ಆದೇಶ ನೀಡಿತ್ತು. ಆದರೆ ಕರ್ನಾಟಕಕ್ಕೆ 460ಕ್ಕೂ ಅಧಿಕ ಟಿಎಂಸಿ ನೀರಿನ ಅವಶ್ಯಕತೆ ಇದೆ. ಕಾವೇರಿ ನದಿ ನೀರನ್ನು ನೆಚ್ಚಿ ಜೀವಿಸುತ್ತಿರುವ ನಾಲ್ಕು ಜಿಲ್ಲೆಗಳಿಗೆ ಈ ತೀರ್ಪು ಮಾರಕವಾಗಿ ಪರಿಣಮಿಸಿದೆ. ರೈತರು ಕಾವೇರಿ ನೀರನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ. ಹಾಗೆಯೇ ತಮಿಳುನಾಡಿಗೆ ಹೆಚ್ಚು ನೀರು ಸಿಕ್ಕರೂ ಕೂಡಾ ನಮಗೆ ಅಗತ್ಯ ನೀರು ಸಿಗುತ್ತಿಲ್ಲ. ಹಿಂದಿನ ನಿಯಮದಂತೆ ನೀರು ಒದಗಿಸಬೇಕು ಎಂದು ಅದು ವಾದಿಸುತ್ತಿದೆ. ಕೇರಳ ಕೂಡಾ ನಮಗೂ ಕೂಡಾ ಕಾವೇರಿ ನೀರಿನಲ್ಲಿ ಪಾಲು ಬೇಕು ಎಂದು ನ್ಯಾಯಲಯದ ಮೊರೆಹೋಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications