ಹಸಿರು ಉಳಿಸಲು ಐಟಿ ಜನರ ಸೈಕಲ್ ಯಾತ್ರೆ
"ಬೆಂಗಳೂರು ಬೆಳದಂತೆಲ್ಲಾ ಗಾರ್ಡನ್ ಸಿಟಿಯಿಂದ ಕಾಂಕ್ರೀಟ್ ಸಿಟಿ ಆಗುತ್ತಾ ಹೋಗುತ್ತಿದೆ. ಬೆಂಗಳೂರಿಗೆ ಅದರ ಮೂಲ ಚೆಲುವನ್ನು ಹಿಂಪಡೆಯುವಂತೆ ಮಾಡುವುದು ನಮ್ಮ ಉದ್ದೇಶ. ಹಸಿರು ಮತ್ತೆ ನಮ್ಮ ನಗರದಲ್ಲಿ ಕಂಗೊಳಿಸಬೇಕು, ಕಲುಷಿತ ವಾತಾವರಣ ಹತೋಟಿಗೆ ಬರಬೇಕು. ಯುವಜನಾಂಗ ಮನಸ್ಸು ಮಾಡಿದರೆ ಇದು ಖಂಡಿತಾ ಸಾಧ್ಯ. ತೈಲಬೆಲೆ ಏರಿಕೆ , ಆರ್ಥಿಕ ಹೊರೆ ದಿನದಿನ ಜನಜೀವನವನ್ನು ನರಕ ಮಾಡುತ್ತಿವೆ. ಇದಕ್ಕೆ ಪರಿಹಾರ ನಾವೇ ಕಂಡುಕೊಳ್ಳಬೇಕು.."
ಕ್ಷಮಿಸಿ ಮೇಲಿನ ವಾಕ್ಯಗಳು ಯಾವುದೇ ರಾಜಕಾರಣಿಯ, ಸಮಾಜ ಸುಧಾರಕರ ಮಾತುಗಳು ಎಂದು ನಿವೇನಿಸಿದ್ದರೆ ನಿಮ್ಮ ಊಹೆ ತಪ್ಪು ಇದು ನಗರದ ಬಗ್ಗೆ ಕಾಳಜಿಯುಳ್ಳ ಯುವ ವೃತ್ತಿಪರ ಐಟಿ ಸಮುದಾಯದ ಒಕ್ಕೊರಲ ಕೂಗು,
*ಮಲೆನಾಡಿಗ
ಐಟಿ ಜನರ ಬಗ್ಗೆ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು, ದೇವಲೋಕದಿಂದ ಇಳಿದು ಬಂದ ಗಂಧರ್ವರು ಎಂಬಂತೆ ಬಿಂಬಿತವಾಗುವುದೇ ಹೆಚ್ಚು. ಸಕಲ ಸೌಲಭ್ಯ, ಹಣ ಅಧಿಕಾರವಿದ್ದರೂ ನಗರದಲ್ಲಿ ಜನಸಾಮಾನ್ಯರ ಜತೆ, ನಾಗರೀಕ ಸೌಲಭ್ಯಗಳನ್ನು ಬಳಸದೆ ದೂರ ಉಳಿಯಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ, ಕಲುಷಿತ ವಾತಾವರಣದ ಪರಿಣಾಮ ಐಟಿ ಜನರಿಗೂ ತಟ್ಟುವುದಂತೂ ನಿಜ.
ಈ ಸಮಸ್ಯೆಗೆ ತಮ್ಮದೇ ಆದ ರೀತಿಯಲ್ಲಿ ಏನಾದರೂ ಮಾಡಬೇಕೆಂದು ಚಿಂತಿಸಿ ಯುವ ಉತ್ಸಾಹಿ ಐಟಿ ತರುಣರು ತಮ್ಮ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ಬದಿಗಿಟ್ಟು ಸೈಕಲ್ ಏರಿದ್ದಾರೆ. ಜು. 27 ರಂದು ಪರಿಸರ ಜಾಗೃತಿ ಮೂಲಕ ಸೈಕಲ್ ಜಾಥವನ್ನು ಹಮ್ಮಿಕೊಂಡಿದ್ದಾರೆ.
ಅಂದು ಲಾಲ್ ಬಾಗ್ ನಿಂದ ಕಬ್ಬನ್ ಪಾರ್ಕ್ ವರೆಗೆ ಮುಂಜಾನೆ 7 ರಿಂದ ಸೈಕಲ್ ಜಾಥಾ ನಡೆಯಲಿದೆ. ಈ ಜಾಥಾಕ್ಕೆ ಸಿಮೇನ್ಸ್, ಇನ್ಫೋಸಿಸ್, ಹೆಚ್ ಪಿ, ಮಣಿಪಾಲ್ ಸಮೂಹ, ರಾಬರ್ಟ್ ಬೊಷ್, ನೋಕಿಯಾ, ಯಾಹೂ, ಸಿಂಫೋನಿ ಮುಂತಾದ ಐಟಿ ಸಂಸ್ಥೆಯ ಯುವಕರು ಆಸಕ್ತಿ ತೋರಿಸಿದ್ದಾರೆ. ಸೈಕಲ್ ಜಾಥಕ್ಕೆ ಮಣಿಪಾಲ್ ಸಂಸ್ಥೆ ಹಾಗೂ ಟ್ರೈ 2 ಹೈರ್ ಸಂಸ್ಥೆ ಸಹಕಾರ ನೀಡುತ್ತಿವೆ.
ಸೈಕಲ್ ಬಳಕೆಯ ಇತಿಹಾಸ, ಪರಿಸರ ಸಂರಕ್ಷತೆ, ಮಾಲಿನ್ಯ ತಡೆ ಜತೆಗೆ ದೈಹಿಕ ಆರೋಗ್ಯ ಸಮತೋಲನಕ್ಕೂ ಸೈಕಲ್ ಸವಾರಿ ಉಪಯುಕ್ತಕಾರಿಯಾಗಿದೆ ಎಂದು. ವೆಬ್ ನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಉತ್ಸಾಹಿ ಯುವಕರು. ಆಸಕ್ತರು ಸೈಕಲ್ ಏರಿ ಜುಮ್ ಅಂಥಾ ಒಮ್ಮೆ ಸವಾರಿ ಮಾಡಬಹುದು.
ಸೂಚನೆ: ಜಾಥದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು, ಸೈಕಲ್ ಅನ್ನು ತಾವೇ ತರಬೇಕು. ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡವರು ಜು. 27 ರಂದು ಬೆಳಗ್ಗೆ 6:30 ಕ್ಕೆ ಲಾಲ್ ಬಾಗ್ ಬಳಿ ಸೇರಬೇಕು.
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ:
ವೆಬ್
ಪುಟ:
http://www.itcyclers.com/
ಇಮೇಲ್:
[email protected]