ಗೋಲಿಬಾರ್ಗೆ ಬಲಿಯಾದ ಸಿದ್ದಲಿಂಗಪ್ಪ ಯಾರು?
ಹಾವೇರಿ, ಜೂ.12 : ಇಷ್ಟಕ್ಕೂ ಮಂಗಳವಾರ ಹಾವೇರಿಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಿದ್ದಲಿಂಗಪ್ಪ ಚೂರಿ ಯಾರು? ಆತನ ಸಾವಿನ ಬಗ್ಗೆ ಮನೆಯವರು, ನೆರೆಹೊರೆಯವರು ಹಾಗೂ ಪೊಲೀಸರು ಏನು ಹೇಳುತ್ತಾರೆ?
ಏಳು ಜನ ಒಡಹುಟ್ಟಿದವರಲ್ಲಿ (ಇಬ್ಬರು ಸಹೋದರರು ಹಾಗೂ ಐದು ಮಂದಿ ಸಹೋದರಿಯರು)ಸಿದ್ದಲಿಂಗಪ್ಪ ಎಲ್ಲರಿಗಿಂತಲೂ ಕಿರಿಯ. ಈತನನ್ನು ಕಳೆದುಕೊಂಡ ಚೂರಿ ಕುಟುಂಬ ಇಂದು ದುಃಖದ ಮಡುವಿನಲ್ಲಿ ರೋದಿಸುತ್ತಿದೆ. ಜನಪ್ರತಿನಿಧಿಗಳು ಮಾತ್ರ ಹಿಂಡು ಹಿಂಡಾಗಿ ಬಂದು ಕುಟುಂಬದವರಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಲೇ ಇದ್ದಾರೆ. ಮೃತನ ಕುಟುಂಬಕ್ಕೆ ಹಾವೇರಿಯ ಹೊರವಲಯದಲ್ಲಿ 30 ಎಕರೆ ಜಮೀನಿದೆ. ಯಾರೊಬ್ಬರ ವಿಷಯದಲ್ಲೂ ಮೂಗು ತೂರಿಸದ ಉತ್ತಮ ಕುಟುಂಬ ಎಂಬ ಹೆಸರಿತ್ತು. ಆದರೆ ಈ ರೀತಿ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ ಚೂರಿ ಕುಟುಂಬಕ್ಕೆ ಭಾರಿ ಮತ್ತು ಮಧ್ಯಮ ಗಾತ್ರದ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಸಂಬಂಧಿಕರೂ ಹೌದು. ಸಿದ್ದಲಿಂಗಪ್ಪನ ಅಣ್ಣ ಷಣ್ಮುಖ ಬಿಜೆಪಿ ಹಾಗೂ ಹಾವೇರಿ ಸಿಎಂಸಿ ಸದಸ್ಯ. ಹಾವೇರಿ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರು ಸಹ. ಕಾವ್ಯ (7) ಮತ್ತು ಕಿರಣ್ (11) ಸಿದ್ದಲಿಂಗಪ್ಪನ ಮಕ್ಕಳು. ಪತ್ನಿ ಕುಸುಮಾ ಮನೆವಾರ್ತೆ ನೋಡಿಕೊಳ್ಳುತ್ತಾರೆ.
ಕುಟುಂಬದ ಕೆಲವರ ಪ್ರಕಾರ, ಸಿದ್ದಲಿಂಗಪ್ಪ ಮಂಗಳವಾರ ರಸಗೊಬ್ಬರ ತರಲು ಹೋಗಿದ್ದರಂತೆ. ನಗರದಲ್ಲಿ ಗದ್ದಲದ ವಾತಾವರಣ ಇರುವ ಕಾರಣ ಶಾಲೆಯಿಂದ ಮಕ್ಕಳನ್ನು ಕರೆತರಲು ಹೋಗಿದ್ದರು ಎನ್ನುತ್ತಾರೆ ಮತ್ತೂ ಕೆಲವರು. ಆದರೆ ಪೊಲೀಸರು ಹೇಳುವ ಕಥೆಯೇ ಬೇರೆ, ಅಂದು ಸಿದ್ದಲಿಂಗಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ. ಪೊಲೀಸ್ ವಾಹನ ಹಾಗೂ ಪೊಲೀಸರೆಡೆಗೆ ಕಲ್ಲು ತೂರುತ್ತಿದ್ದ. ಇದೆಲ್ಲವೂ ವಿಡಿಯೋದಲ್ಲಿ ಚಿತ್ರೀಕರಣವಾಗಿದೆ ಎನ್ನುತ್ತಾರೆ ಪೊಲೀಸರು. ನೆರೆಹೊರೆಯವರು ಹೇಳುವಂತೆ ಸಿದ್ದಲಿಂಗಪ್ಪ ಬಿಜೆಪಿಯ ಸದಸ್ಯರಾಗಿರಲಿಲ್ಲ ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ಮಾಡಿದ್ದ ಅಷ್ಟೆ ಎನ್ನುತ್ತಾರೆ.
(ದಟ್ಸ್ಕನ್ನಡ ವಾರ್ತೆ)