ಬಸ್ ದರ ಏರಿಕೆ ಸದ್ಯಕ್ಕಿಲ್ಲ : ವಿ.ಎಸ್. ಆಚಾರ್ಯ
ಬೆಂಗಳೂರು, ಜೂ. 5 : ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ದರಗಳ ಹೆಚ್ಚಳದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು.
ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಸಂಸ್ಥೆಗಳ ಬಸ್ಸು ದರ ಏರಿಸಬೇಕೆಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ದರವನ್ನು ಶೇ. 10 ರಷ್ಟು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ಸುದ್ದಿ ದಟ್ಟವಾಗಿ ಹರಡಿತ್ತು. ಈ ಎಲ್ಲ ಉಪಾಪೋಹಗಳನ್ನು ತಳ್ಳಿ ಹಾಕಿರುವ ಸರ್ಕಾರ, ಜನಸಾಮಾನ್ಯರ ಮೇಲೆ ಈಗಾಗಲೇ ಅಧಿಕ ಹೊರೆ ಬಿದ್ದಿದೆ. ಇನ್ನು ಬಸ್ ಏರಿಕೆ ಮಾಡಿದರೆ ಶ್ರೀಸಾಮಾನ್ಯನ ಸ್ಥಿತಿ ಚಿಂತಾಜನಕವಾಗಲಿದೆ. ಈ ಎಲ್ಲ ಸಂಭವನೀಯ ಚರ್ಚೆ ನಡೆಸಿದ ನಂತರ ಬಸ್ ದರವನ್ನು ಯಥಾಸ್ಥಿತಿ ಮುಂದುವರೆಸಲಾಗಿದೆ ಎಂದು ಆಚಾರ್ಯ ಹೇಳಿದರು.
ಜುಲೈ 10 ರಂದು 2008ರ ಬಜೆಟ್ ಮಂಡಿಸಲಾಗುವುದು ಎಂದ ಅವರು, ಮಾರಾಟ ಮತ್ತು ಸೇವಾ ತೆರಿಗೆಯನ್ನು ಹೆಚ್ಚಿಸುವ ಯಾವ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶೆಟ್ಟರ್ ಅವಿರೋಧ ಆಯ್ಕೆ : ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿ ನಿರೀಕ್ಷೆಯಂತೆ ಯಾವುದೇ ಗೊಂದಲವಿಲ್ಲದಂತೆ ದ್ವನಿ ಮತದಾನದ ಮೂಲಕ ಸಭಾಧ್ಯಕ್ಷರನ್ನಾಗಿ ಜಗದೀಶ್ ಶೆಟ್ಟರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸದನದ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭಾಧ್ಯಕ್ಷ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಸೂಚಿಸಿದರು. ಸಚಿವ ರೇವೂ ನಾಯಕ ಬೆಳಮಗಿ ಅನುಮೋದಿಸಿದರು. ಹಂಗಾಮಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅಂಗೀಕರಿಸಿ ಶೆಟ್ಟರ್ ಅವರನ್ನು ನೂತನ ಸಭಾಧ್ಯಕ್ಷ ಎಂದು ಘೋಷಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ. ಸಭಾಧ್ಯಕ್ಷ ಸ್ಥಾನಕ್ಕೆ ಸಹಕರಿಸಿರುವ ವಿರೋಧ ಪಕ್ಷಗಳಿಗೆ ಉಪಸಭಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)