ಕೆಂಗಲ್ ಹನುಮಂತಯ್ಯನವರ ಶತಮಾನೋತ್ಸವ
ನವದೆಹಲಿ, ಮೇ 19: ಸ್ವಾತಂತ್ರ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಶತಮಾನೋತ್ಸವವನ್ನು ಭಾನುವಾರ ದೆಹಲಿ ಕನ್ನಡ ಪತ್ರಿಕೆಯ ಆಶ್ರಯದಲ್ಲಿ ಅದ್ಧೂರಿಯಿಂದ ಆಚರಿಸಿತು.
ಕೆಂಗಲ್ ಹನುಮಂತಯ್ಯನವರ ಸಾಧನೆ, ಸ್ವಾತಂತ್ರ ಹೋರಾಟದ ಸಂಘರ್ಷದ ಜೀವನ, ರಾಜಕೀಯ ಬದುಕು, ತತ್ವ ಸಿದ್ಧಾಂತಗಳ ಕುರಿತು ಚಿಂತನೆಯನ್ನು ನಡೆಸಲಾಯಿತು. ಹಾಗೆಯೇ ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರ ರೈಲು ಸಚಿವರಾಗಿ ಮಾಡಿದ ಕೆಲಸಗಳನ್ನು ಕೂಡಾ ನೆನಪಿಸಿಕೊಳ್ಳಲಾಯಿತು. 1952 ರಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಕೆಂಗಲ್ ಹನುಮಂತಯ್ಯ ವಿಧಾನಸೌಧದ ಕಟ್ಟಡ ನಿರ್ಮಾಣಕ್ಕೆ ಪಟ್ಟ ಶ್ರಮ, 1971 ರಲ್ಲಿ ಕಡಿಮೆ ಅವಧಿಗೆ ಕೇಂದ್ರದ ರೈಲು ಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಅಜರಾಮರವಾಗಿವೆ ಎಂದು ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಎಂ.ಬಿ.ಸಾಮಗ ಪ್ರಶಂಸಿಸಿದರು.
ಕನ್ನಡ ನಾಡು ನುಡಿಯ ಅಪ್ಪಟ ಅಭಿಮಾನಿಯಾಗಿದ್ದ ಕೆಂಗಲ್ ಹನುಮಂತಯ್ಯ ಕನ್ನಡ ಏಳಿಗೆಗೆ ಹಗಲಿರುಳು ಶ್ರಮಿಸಿದರು. ಕೆಂಗಲ್ ಹನುಮಂತಯ್ಯ ಅವರ ಶತಮಾನೋತ್ಸವದ ಗಳಿಗೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಗರೀಬ್ ರಥ ರೈಲು ಸಂಚಾರಿಸಲು ಅನುಮತಿ ನೀಡಬೇಕೆಂದು ಸಾಮಗ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)