ಚುನಾವಣೆ ಬಿಸಿ ನಡುವೆ ಧರ್ಮರಾಯಸ್ವಾಮಿ ಕರಗ
ಬೆಂಗಳೂರು, ಏ.20: ಐಟಿ ನಗರ ಚುನಾವಣಾ ಬಿಸಿಯಲ್ಲಿ ಬೇಯುತ್ತಿರುವಾಗ, ಬೆಳದಿಂಗಳ ಹೊತ್ತು ಕರಗ ಜಾತ್ರೆ ಬಂದಿದೆ. ಚಿತ್ರ ಪೂರ್ಣಿಮೆ ದಿನವಾದ ಭಾನುವಾರ ಸಂಜೆಯಿಂದ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವೈಭವದ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಕರಗದ ಶಕ್ತಿದೇವತೆ ದ್ರೌಪದಿಯ ಒಕ್ಕಲಾದ ತಿಗಳರು ಕರಗವನ್ನು ಭಯ ಭಕ್ತಿಯಿಂದ ಹೊತ್ತು ಸಂಭ್ರಮದಿಂದ ಸಂಚರಿಸಲಿದ್ದಾರೆ.ಪ್ರತಿ ವರ್ಷ ಪೂಜಾರರ ಕುಟುಂಬದವರು ಕರಗವನ್ನು ಹೊರುತ್ತಾರೆ. ಈಬಾರಿ ಈ ಕುಟುಂಬದ ಎ. ಜ್ಞಾನೇಂದ್ರ ಅವರು ಇಂದು ರಾತ್ರಿ 12:30 ಕ್ಕೆ ಧರ್ಮರಾಯಸ್ವಾಮಿ ಗುಡಿಯಿಂದ ಕರಗವನ್ನು ಹೊತ್ತು ಮುನ್ನೆಡೆಯಲಿದ್ದಾರೆ.
ನಂತರ ಕರಗ ಅವಿನ್ಯೂ ರಸ್ತೆ, ಕೆ.ಆರ್. ಮಾರ್ಕೆಟ್, ಕಾಟನ್ ಪೇಟೆ, ಓಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ ತಲುಪಲಿದೆ. ದರ್ಗಾದಲ್ಲಿ ಸೇವೆಯಾದ ನಂತರ ನಿಮಿಷಾಂಭ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ ಬಳೆ, ಗರಡಿ ಸ್ವೀಕರಿಸಿ ಮುತ್ಯಾಲಮ್ಮ ದೇವಸ್ಥಾನ, ಹಳೆ ರಂಗಸ್ವಾಮಿ ದೇವಸ್ಥಾನದ ಮೂಲಕ ಕಬ್ಬನ್ ಪೇಟೆ, ತಿಗಳರ ಪೇಟೆ ತಲುಪಿ ಕುಲಬಾಂಧವರಿಂದ ಪೂಜೆ ಸ್ವೀಕರಿಸಿ ಮರುದಿನ ಸೂರ್ಯೋದಯದ ವೇಳೆಗೆ ಧರ್ಮರಾಯಗುಡಿಯನ್ನು ತಲುಪಲಿದೆ.
ವಿಶೇಷ ಕಾರ್ಯಕ್ರಮಗಳು: ಕರಗ ಮಹೋತ್ಸವದ ಅಂಗವಾಗಿ ವಿಜಯಪುರದಲ್ಲಿ ಪೊಂಗಲ್ ಸೇವೆ, ಅನ್ನದಾನವನ್ನು ಏರ್ಪಡಿಸಲಾಗಿದೆ. ರಾತ್ರಿ 7 ಕ್ಕೆ ಕಲ್ಯಾಣೋತ್ಸವ, ರಾತ್ರಿ 8 ಕ್ಕೆ ಆರತಿ ದೀಪೋತ್ಸವ,10 ಕ್ಕೆ ಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ, ರಾತ್ರಿ 11 ಕ್ಕೆ ಫ್ರೆಂಡ್ ಆಫ್ ವಾಯ್ಸ್ ತಂಡದಿಂದ ಆರ್ಕೆಸ್ಟ್ರಾ ಇರುತ್ತದೆ.ಏ. 22 ರ ತನಕ ವಿವಿಧ ಆಚರನೆಗಳು ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಚ್. ಮುನಿಯಪ್ಪ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications