ಕನ್ನಡಿಗರ ಪಾಲಾದ ಬೆಳಗಾವಿ ಮೇಯರ್ ಸ್ಥಾನ
ಬೆಂಗಳೂರು, ಮಾ.4: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ಕನ್ನಡಿಗರ ಪಾಲಾಗಿವೆ. ಇಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಪ್ರಶಾಂತಾ ಬುಡವಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಯೂನಸ್ ಮೋಮಿನ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಕ್ಷಾಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ಅವರು ಮೇಯರ್ ಸ್ಥಾನಕ್ಕೆ ಕನ್ನಡಿಗರನ್ನು ಆಯ್ಕೆ ಮಾಡಬೇಕು ಎಂದು ಹೊಸದಾಗಿ ಆಯ್ಕೆಯಾಗಿದ್ದ ಕನ್ನಡಿಗ ಕಾರ್ಪೋರೇಟರ್ಗಳಿಗೆ ತಾಕೀತು ಮಾಡಿದ್ದರು. ಬೆಳಗಾವಿ ಮೇಯರ್ ಸ್ಥಾನಕ್ಕೆ ಕನ್ನಡಿಗರು ಆಯ್ಕೆ ಆಗಬೇಕು ಎಂಬುದು ನಮ್ಮ ಕನಸು ಎಂದು ನಾರಾಯಣ ಗೌಡ ಹೇಳಿದ್ದರು. 30 ಸದಸ್ಯರು ಕೈ ಎತ್ತಿ ತಮ್ಮ ಬೆಂಬಲವನ್ನು ಸೂಚಿಸುವ ಮೂಲಕ ಮೇಯರ್ ಸ್ಥಾನಕ್ಕೆ ಕನ್ನಡಿಗ ಪ್ರಶಾಂತ್ ಬುಡವಿ ಆಯ್ಕೆಯಾಗಿದ್ದಾರೆ.
ಒಟ್ಟು 58 ಸದಸ್ಯರನ್ನು ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಸರ್ವಭಾಷಿಕ ಸಮವಿಚಾರ ವೇದಿಕೆಯೊಂದಿಗೆ 29 ಸದಸ್ಯರು ಗುರುತಿಸಿಕೊಂಡಿದ್ದಾರೆ. ಎಂ.ಇ.ಎಸ್. ಬೆಂಬಲಿತ 26 ಸದಸ್ಯರೂ ಅಧಿಕಾರ ಪಡೆಯಲು ಹಣಾಹಣಿ ನಡೆಸಿದ್ದರು. ಸಂಸದ ಸುರೇಶ್ ಸಿ. ಅಂಗಡಿ ಸಹ ಕನ್ನಡಿಗರಿಗೆ ಬೆಂಬಲ ಸೂಚಿಸಿದ್ದರು ಹಾಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಸ್ಥಾನಗಳು ಕನ್ನಡಿಗರ ಪಾಲಾಗಿವೆ.
(ದಟ್ಸ್ಕನ್ನಡ ವಾರ್ತೆ)