ವಿಧಾನಸಭೆ ಚುನಾವಣೆಯತ್ತ ರಾಜ್ಯ ದಾಪುಗಾಲು?
ಬೆಂಗಳೂರು, ಮಾ.04 : ಚುನಾವಣಾ ಆಯೋಗ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ವಿಧಾನಸಭೆಗೆ ಬೇಗನೆ ಚುನಾವಣೆ ನಡೆಯುವುದೆಂಬ ಗಾಳಿಸುದ್ದಿಗೆ ಪುಷ್ಟಿ ನೀಡುವಂತೆ ವಿಧಾನಸೌಧದ ಮೊಗಸಾಲೆಯಲ್ಲಿ ಮುಖ್ಯ ಚುನಾವಣಾಯುಕ್ತರ ನೇತೃತ್ವದಲ್ಲಿ ಚುನಾವಣಾ ಚಟುವಟಿಕೆಗಳು ಬಿರುಸಾಗಿವೆ.
ಇಂದು ನಡೆದ ಮೊದಲ ಸಭೆಯಲ್ಲಿ ಮುಖ್ಯ ಚುನಾವಣಾಯುಕ್ತ ಎನ್. ಗೋಪಾಲಸ್ವಾಮಿ ಅವರು ಉಪ ಮುಖ್ಯ ಚುನಾವಣಾಯುಕ್ತ ಜೆ. ಬಾಲಕೃಷ್ಣನ್ ಮತ್ತು ಚುನಾವಣಾಯುಕ್ತರಾದ ನವೀನ್ ಚಾವ್ಲಾ ಮತ್ತು ಎಸ್.ವೈ.ಖುರೇಷಿ ಅವರೊಡನೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಿದರು.
ಸರ್ವಸದಸ್ಯರಿರುವ ಕೇಂದ್ರ ಚುನಾವಣಾಯೋಗದ ತಂಡ ನಾಳೆ ಬುಧವಾರ ರಾಜ್ಯ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಎಲ್ಲ ಪಕ್ಷಗಳ ರಾಜಕೀಯ ಧುರೀಣರೊಡನೆ ಇಡೀ ದಿನ ಚುನಾವಣೆಯ ರೂಪುರೇಷೆಯ ಬಗ್ಗೆ ಚರ್ಚಿಸಲಿದ್ದಾರೆ.
ಕುಲದೀಪ್ ಸಿಂಗ್ ಆಯೋಗದ ಶಿಪಾರಸಿನಂತೆ ರಾಜ್ಯ ಚುನಾವಣಾ ಆಯೋಗ ಕೈಗೊಂಡಿರುವ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡನೆ ಕಾರ್ಯ ಮತ್ತು ಮತದಾರರ ಪರಿಷ್ಕೃತ ಪಟ್ಟಿಯನ್ನು ಪರೀಕ್ಷಿಸಲು ನಗರಕ್ಕೆ ಕೇಂದ್ರ ಚುನಾವಣಾ ಆಯೋಗದ ತಂಡ ಆಗಮಿಸಿದೆ. ಇಡೀ ತಂಡ ರಾಜ್ಯದಲ್ಲಿ ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ನಿರೀಕ್ಷೆಗೆ ಮುಂಚಿತವಾಗಿಯೇ ಚುನಾವಣೆ ನಡೆಯುವುದೆಂಬ ಸುದ್ದಿ ದಟ್ಟವಾಗಿದೆ.
(ಯುಎನ್ಐ)