ಮೇ ತಿಂಗಳಲ್ಲಿಯೇ ವಿಧಾನಸಭೆ ಚುನಾವಣೆ ಸಂಭವ
ಬೆಂಗಳೂರು, ಮಾ.04 : ಕಾಂಗ್ರೆಸ್ ಪಕ್ಷದ ನಿರೀಕ್ಷೆಗೆ ವ್ಯತಿರಿಕ್ತವಾಗಿ ಮತ್ತು ಬಿಜೆಪಿ ಪಕ್ಷದ ನಿರೀಕ್ಷೆಯಂತೆ ಮೇನಲ್ಲಿಯೇ ರಾಜ್ಯದಲ್ಲಿ ವಿಧಾನಸಭೆ ಚುನವಾಣೆ ನಡೆಯುವುದು ಹೆಚ್ಚು ಕಡಿಮೆ ಖಚಿತವಾದಂತಾಗಿದೆ.
ಮತಪಟ್ಟಿ ಪರಿಷ್ಕರಣೆ ಮತ್ತು ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯನ್ನು ಪರಿಶೀಲಿಸಲು ರಾಜ್ಯಕ್ಕೆ ಆಗಮಿಸಿರುವ ಮುಖ್ಯ ಚುನಾವಣಾಧಿಕಾರಿ ಎನ್. ಗೋಪಾಲಸ್ವಾಮಿ ಮೇನಲ್ಲಿ ಚುನಾವಣೆ ನಡೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮತ ಪರಿಷ್ಕರಣೆಯ ಪ್ರಕ್ರಿಯೆಯೂ ಮಾರ್ಚ್ ತಿಂಗಳೊಳಗೆ ಮುಗಿಯಲಿದ್ದು ಅಂತಿಮ ಪಟ್ಟಿ ಹೊರಬೀಳಲಿದೆ. ಮತಪಟ್ಟಿ ಪರಿಷ್ಕರಣೆ ಬಗ್ಗೆ ಗೋಪಾಲಸ್ವಾಮಿ ತೃಪ್ತಿ ವ್ಯಕ್ತಪಡಿಸಿದ್ದಾರೆ.
ನಗರಕ್ಕೆ ಆಗಮಿಸಿರುವ ಚುನಾವಣಾಯೋಗದ ಸರ್ವಸದಸ್ಯರ ತಂಡ ಮಂಗಳವಾರ ಚುನಾವಣೆ ಕುರಿತಂತೆ ವಿಧಾನಸೌಧದಲ್ಲಿ ವಿಸ್ತ್ರತವಾಗಿ ಚರ್ಚಿಸಿತು. ನಾಳೆ ಕೂಡ ರಾಜ್ಯದ ಮುಖ್ಯ ಚುನಾವಣಾಯುಕ್ತ, ಎಲ್ಲ ಜಿಲ್ಲಾಧಿಕಾರಿ ಮತ್ತು ರಾಜಕೀಯ ನಾಯಕರೊಂದಿಗೆ ಚುನಾವಣಾಯೋಗದ ತಂಡ ಮಾತುಕತೆ ನಡೆಸಲಿದೆ.
ಈಗಾಗಲೆ ಚುನಾವಣಾ ಸಿದ್ಧತೆಯತ್ತ ಮಗ್ನವಾಗಿರುವ ಬಿಜೆಪಿ ಆದಷ್ಟು ಬೇಗನೆ ಚುನಾವಣೆ ನಡೆಸಬೇಕೆಂದು ಕೇಂದ್ರ ಚುನಾವಣಾಯೋಗಕ್ಕೆ ಒತ್ತಾಯಿಸಿತ್ತು. ಆದರೆ, ಮತಪಟ್ಟಿಯಲ್ಲಿ ಅನೇಕ ದೋಷಗಳಿದ್ದು, ಪರಿಪೂರ್ಣವಾಗಿ ಪರಿಷ್ಕರಿಸಿದೇ ಚುನಾವಣೆ ಘೋಷಿಸಬಾರದೆಂದು ಕಾಂಗ್ರೆಸ್ ದುಂಬಾಲು ಬಿದ್ದಿತ್ತು.
(ಯುಎನ್ಐ)
ಪೂರಕ
ಓದಿಗೆ
ವಿಧಾನಸಭೆ
ಚುನಾವಣೆಯತ್ತ
ರಾಜ್ಯ
ದಾಪುಗಾಲು?