ಕನ್ನಡ ವಿರೋಧಿ ಕವನದ ವಿರುದ್ಧ ಕಿಚ್ಚೆದ್ದ ಕರವೇ
ಬೆಂಗಳೂರು, ಮಾ.03 : ಕನ್ನಡಿಗ, ಕರ್ನಾಟಕವನ್ನು ಅವಹೇಳನ ಮಾಡಿ ಸಾಸ್ಕೆನ್ ಸಾಫ್ಟ್ವೇರ್ ಕಂಪನಿಯ ಉದ್ಯೋಗಿ ಕವನ ಬರೆದು ಪ್ರತಿದಿನ ಹಾಡುತ್ತಿದ್ದನೆಂಬ ವರದಿಗೆ ಪ್ರತಿಕ್ರಿಯೆಯಾಗಿ ಸಾಸ್ಕೆನ್ ಕಂಪನಿಗೆ ಸೋಮವಾರ ಮಧ್ಯಾನ್ಹ ನುಗ್ಗಿದ ನೂರಾರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು 50ಕ್ಕೂ ಹೆಚ್ಚಿನ ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಕನ್ನಡಿಗರು ನಾಯಿಗಳು, ಕನ್ನಡಿಗರು ಗುಗ್ಗುಗಳು ಎಂದು ಪದ್ಯ ಬರೆದು ಕನ್ನಡಿಗರನ್ನು ಅವಮಾನ ಮಾಡಿದ ಲೀ ಎಂಬಾತನನ್ನು ಕೂಡಲೆ ಬಂಧಿಸಬೇಕೆಂದು ಕರವೇ ಕಾರ್ಯಕರ್ತರು ಪೊಲೀಸರನ್ನು ಆಗ್ರಹಿಸಿದ್ದಾರೆ. ಲೀ ಮಾತ್ರವಲ್ಲ ಶೇ.90ರಷ್ಟಿರುವ ಕಂಪನಿಯಲ್ಲಿ ಕನ್ನಡಕ್ಕೆ ಅವಮಾನ ಮಾಡಿ ಕವನ ಹಾಡುತ್ತಿದ್ದ ಎಲ್ಲ ಉದ್ಯೋಗಿಗಳ ಮೇಲೆ ಕ್ರಮ ಜರುಗಿಸಬೇಕು, ಅವರನ್ನು ಗಡಿಪಾರು ಮಾಡಬೇಕು ಮತ್ತು ಕಂಪನಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಏರ್ಪೋರ್ಟ್ ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿನ ಸ್ಯಾಸ್ಕೆನ್ನ ಎರಡೂ ಕಚೇರಿಗಳ ಮೇಲೆ ಏಕಕಾಲಕ್ಕೆ ಕರವೇ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಬೆಳಗಾವಿಯಲ್ಲಿನ ಕಚೇರಿಯ ಮೇಲೂ ಕಾರ್ಯಕರ್ತರು ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ.
ಕನ್ನಡದ ನೆಲದ ಗಾಳಿ, ನೀರು, ಅನ್ನ ಸೇವಿಸಿ ಕನ್ನಡಿಗರನ್ನೇ ಅವಮಾನ ಮಾಡುವ ಇಂಥ ಕಂಪನಿಗಳಿಗೆ ಇನ್ನು ಮೇಲೆ ಕರ್ನಾಟಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಯಾಸ್ಕೆನ್ ಮಾತ್ರವಲ್ಲ ಕನ್ನಡ ಸಂಸ್ಕೃತಿಯನ್ನು ಅವಹೇಳನ ಮಾಡುವ ಯಾವುದೇ ಸಾಫ್ಟ್ವೇರ್ ಕಂಪನಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ನಾರಾಯಣ ಗೌಡ ಹೇಳಿದ್ದಾರೆ.
ಈ ರೀತಿ ಹಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದಿದೆ ಎಂದು ಸ್ಯಾಸ್ಕೆನ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಲೀ ಮತ್ತಿತರರ ಮೇಲೆ ಎಂಥ ಕ್ರಮ ಜರುಗಿಸುತ್ತದೆಂಬ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಕಂಪನಿ ಕ್ರಮ ಜರುಗಿಸುವವರೆಗೂ ತಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)
ಪೂರಕ
ಓದಿಗೆ
ಸ್ಯಾಸ್ಕೆನ್
'ಕವಿ'
ಗಡೀಪಾರು
ಮಾಡಲು
ಕರವೇ
ಆಗ್ರಹ
ಕನ್ನಡಿಗರನ್ನು
ಅವಹೇಳನ
ಮಾಡುವ
ಕವನ