ಸ್ಯಾಸ್ಕೆನ್ 'ಕವಿ' ಗಡೀಪಾರು ಮಾಡಲು ಕರವೇ ಆಗ್ರಹ
ಬೆಂಗಳೂರು, ಮಾ. 3 : ಕನ್ನಡಿಗರನ್ನು ಅವಹೇಳನ ಮಾಡಿದ ಸ್ಯಾಸ್ಕೆನ್ ಕಂಪನಿಯ ನೌಕರ ಮತ್ತು ಕಂಪನಿ ಇಬ್ಬರೂ ಕೂಡಲೆ ಕ್ಷಮೆ ಕೇಳಬೇಕು. ಗಲೀಜು ಕವನ ಬರೆದ ಈ ವಿದೇಶಿ ಮೂಲದ ವ್ಯಕ್ತಿಯನ್ನು ಬಂಧಿಸಬೇಕು ಮತ್ತು ಆತನನ್ನು ಕರ್ನಾಟಕದಿಂದ ಗಡೀಪಾರು ಮಾಡಬೇಕು ಎಂದು ಕನ್ನಡ ಹೋರಾಟಗಾರರು ಆಗ್ರಹಿಸಿದ್ದಾರೆ.
ಕನ್ನಡಿಗರ ಆತ್ಮಾಭಿಮಾನವನ್ನು ಅನಗತ್ಯವಾಗಿ ಕೆಣಕಿದ ಈ ಘಟನೆ ವಿರುದ್ಧ ಇನ್ನಷ್ಟು ಪ್ರತಿಭಟನೆ ಮಾಡಲು ಕರವೇ ಮುಂದಾಗಿದ್ದು ನಾಳೆ ಮಂಗಳವಾರ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ವಸಂತನಗರದಲ್ಲಿರುವ ರಾಜ್ಯ ಮಾಹಿತಿ ತಂತ್ರಜ್ಞಾನ ಕಚೇರಿ ಮುಂದೆ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ದಟ್ಸ್ಕನ್ನಡ ಡಾಟ್ ಕಾಂಗೆ ತಿಳಿಸಿದರು.
ಅವಹೇಳನಕಾರಿ ಪದ್ಯ ಗೀಚಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕರವೇ ಕಾರ್ಯಕರ್ತರು ಕಂಪನಿಯ ಬೆಂಗಳೂರಿನ ಎಲ್ಲಾ ಕಚೇರಿಗಳಿಗೆ ಮಂಗಳವಾರ ಬೀಗ ಜಡಿಯುವುವರೆಂದು ಗೌಡ ಹೇಳಿದರು.
ಸ್ಯಾಸ್ಕೆನ್ ಸಾಫ್ಟ್ವೇರ್ ಕಂಪನಿಯ ಲೀ ಎಂಬಾತ ಕನ್ನಡಿಗರು ಗುಗ್ಗುಗಳು, ಪೆದ್ದುಗಳು ಮುಂತಾದಾಗಿ ಅವಮಾನ ಮಾಡುವಂಥ ಇಂಗ್ಲಿಷ್ ಪದ್ಯ ಬರೆದಿದ್ದ. ಅಷ್ಟೇ ಅಲ್ಲ, ಆ ಪದ್ಯವನ್ನು ಕಂಪನಿಯ ಎಲ್ಲ ಉದ್ಯೋಗಿಗಳು ರಾಗವಾಗಿ ಹಾಡಬೇಕು ಎಂದು ಪ್ರತಿಪಾದಿಸಿದ್ದ. ಈ ವರ್ತನೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಸೋಮವಾರ ಮಧ್ಯಾನ್ಹ ಕಂಪನಿಯ ಹೊಸೂರು ಮತ್ತು ವಿಮಾನ ನಿಲ್ದಾಣ ರಸ್ತೆಯ ಕಚೇರಿಗೆ ನುಗ್ಗಿ ಪೀಠೋಪಕರಣ, ಕಂಪ್ಯೂಟರ್ಗಳನ್ನು ಚಚ್ಚಿ ಹಾಕಿದ್ದರು.
(ದಟ್ಸ್ಕನ್ನಡ ವಾರ್ತೆ)
ಪೂರಕ
ಓದಿಗೆ
ಕನ್ನಡ
ವಿರೋಧಿ
ಕವನದ
ವಿರುದ್ಧ
ಕಿಚ್ಚೆದ್ದ
ಕರವೆ
ಕನ್ನಡಿಗರನ್ನು
ಅವಹೇಳನ
ಮಾಡುವ
ಕವನ