ಬನ್ನೇರುಘಟ್ಟ ರಸ್ತೆಯಲ್ಲಿ ಕೊಲೆ, ಸುಲಿಗೆ, ದರೋಡೆ
ಬೆಂಗಳೂರು, ಫೆ.29: ಕಾಲ್ ಸೆಂಟರ್ನಲ್ಲಿ ಉದ್ಯೋಗ ಮಾಡುತ್ತಿದ್ದ ಆಂಧ್ರಪ್ರದೇಶದ ಹಿಂದೂಪುರ ಮೂಲದ ಶಶಿಧರ್(29) ಎಂಬುವರನ್ನು ಇಂದು ಮುಂಜಾನೆ 1.30ರ ಸಮಯದಲ್ಲಿ ದರೋಡೆಕೋರರ ಗುಂಪು ಇರಿದು ಕೊಲೆ ಮಾಡಿ ಪರಾರಿಯಾಗಿದೆ.
ಕಾಲ್ಸೆಂಟರ್ ಕೆಲಸ ಮುಗಿಸಿಕೊಂಡು ಗುರುವಾರ ರಾತ್ರಿ ಮನೆಗೆ ಬಂದ ಶಶಿಧರ್ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಸಲುವಾಗಿ ಹೊರಗೆ ಹೋಗಿದ್ದಾರೆ. ಶಶಿಧರ್ ಹಾಗೂ ಅವರ ಸ್ನೇಹಿತ ಮಲ್ಲಿಕಾರ್ಜುನ ಚಹಾ ಸೇವಿಸುವ ಸಲುವಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಲ್ಸೆಂಟರ್ನಿಂದ ಸ್ವಲ್ಪ ದೂರದಲ್ಲಿದ್ದ ಚಹಾ ಅಂಗಡಿಗೆ ನಡೆದುಕೊಂಡು ಬಂದಿದ್ದಾರೆ. ಅದೇ ಸಮಯದಲ್ಲಿ ನಾಲ್ವರು ದರೋಡೆಕೋರರು ಇವರನ್ನು ಅಡ್ಡಗಟ್ಟಿ ಹಣ ಕೊಡಿ ಎಂದು ಬೆದರಿಸಿದ್ದಾರೆ. ಆಗ ಶಶಿಧರ್ ಮತ್ತು ಮಲ್ಲಿಕಾರ್ಜುನ ನಾವೇಕೆ ಕೊಡಬೇಕು ಎಂದು ಕೇಳುತ್ತಿದ್ದಂತೆ ಇವರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದೇ ಸಮಯಕ್ಕೆ ಮಲ್ಲಿಕಾರ್ಜುನ ಹತ್ತಿರದಲ್ಲೇ ಇದ್ದ ಕಾಲ್ಸೆಂಟರ್ನ ತನ್ನ ಸಹೋದ್ಯೋಗಿಗಳಿಗೆ ವಿಷಯ ತಿಳಿಸಲು ಓಡಿ ಹೋಗಿದ್ದಾನೆ. ಇತ್ತ ಶಶಿಧರ್ ಅವರನ್ನು ದರೋಡೆಕೋರರು ಹರಿತವಾದ ಆಯುಧದಿಂದ ಇರಿದು ಓಡಿ ಹೋಗಿದ್ದಾರೆ.
ಮಲ್ಲಿಕಾರ್ಜುನ ತನ್ನ ಸಹೋದ್ಯೋಗಿಗಳೊಂದಿಗೆ ಬಂದು ನೋಡಿದಾಗ ಶಶಿಧರ್ ಕೆಳಗೆ ಬಿದ್ದಿದ್ದನ್ನು ಕಂಡು ಸಾಗರ್ ಅಪೊಲೋ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಶಶಿಧರ್ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೈಕೋ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.
(ದಟ್ಸ್ಕನ್ನಡ ವಾರ್ತೆ)