ಅಗಡಿ ಆನಂದವನಕ್ಕೆ ಶತಮಾನೋತ್ಸವ ಸಂಭ್ರಮ
ವರದಿ: ನಾಗರಾಜ ಮತ್ತಿಗಾರ ,ದತ್ತಿ ಲಕ್ಷ್ಮೀನಾರಾಯಣ ಕಲಗಾರು
ಚಿತ್ರ: ಭಾರತೀಶ
ಅಗಡಿ, ಫೆ. 27 : ಗಡಿಯಿಲ್ಲದ ಊರು ಅಗಡಿ. ಹಾವೇರಿಯಿಂದ ಹೊಸಪೇಟೆಗೆ ಹೋಗುವ ದಾರಿಯಲ್ಲಿ ಸಿಗುವ ಪುಟ್ಟ ಹಳ್ಳಿ. ಇಲ್ಲಿರುವ ಆನಂದವನ ಆಶ್ರಮ ಪ್ರಸಿದ್ದ ಸ್ಥಳ. ಶ್ರೀಶೇಷಾಚಲ ಸಾಧುಗಳ ತಪೋಭೂಮಿ .ವೇದ ರಕ್ಷಣೆಯಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯ ಎನ್ನುವ ದೃಡ ನಿರ್ಧಾರದೊಂದಿಗೆ ಸ್ಥಾಪಿತವಾದ ವೇದ ಸಂಸ್ಕ್ರತ ಪಾಠ ಶಾಲೆ. ಹಾಗೆಯೇ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವ ಸ್ಥಾನವನ್ನು ಪಡೆದಿರರುವ ಸದ್ಬೋಧ ಚಂದ್ರಿಕೆ ಮಾಸಪತ್ರಿಕೆಯ ಕರ್ಮಭೂಮಿ. ಈಗ ಇವೆಲ್ಲಕ್ಕೂ ನೂರರ ಸಂಬ್ರಮ.ಹಾಗೂ ಸಧ್ಯದ ಸ್ವಾಮಿಗಳಾದ ಚಿದಾನಂದಮೂರ್ತಿ ಚಕ್ರವರ್ತಿಗಳ ಎಪ್ಪತ್ತರ ಸಂಭ್ರಮದ ಭೀಮರಥ ಶಾಂತಿ ಮಹೋತ್ಸವವೂ ಹೌದು.
ಈ ವಿಶೇಷಗಳ ಆಚರಣೆಯನ್ನು ತಾರೀಖು 26 ಫೆಬ್ರುವರಿ ಯಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ. ಉತ್ಸವದ ಉದ್ಘಾಟನೆಯನ್ನು ನಿವೃತ್ತ ರಾಜ್ಯಪಾಲ ನ್ಯಾಯಮೂರ್ತಿ ರಾಮಾಜೋಯಸ್ ಅವರು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮಂಗಳವಾರ ನೇರವೇರಿಸಿದರು.
ನಿತ್ಯ ಜೀವನದಲ್ಲಿ ನಾವು ಮಾಡುವ ಸಮರ್ಪಣೆಯೇ ಯಜ್ಞ, ಬದುಕಿನಲ್ಲಿ ನಾವುಗಳಿಸಿದನ್ನು ಪ್ರಕೃತಿಯಿಂದ ನಾವು ಪಡೆದದನ್ನು ಮರಳಿ ಪ್ರಕೃತಿಗೆ ಕೊಡುವ ಕ್ರಿಯೆಯೆ ಯಜ್ಞ ಇದರಿಂದ ಮಳೆ ಬೆಳೆಯ ಪ್ರಾಕೃತಿಕ ಚಕ್ರ ಸಮತೋಲನದಲ್ಲಿ ಇರುತ್ತದೆ. ಆದರೆ ಇಂದು ಬೇರೆ ಬೇರೆ ಕಾರಣಗಳಿಂದ ಸಮಾಜ ಬದಲಾಗುತ್ತಿದೆ. ಕೆಲವು ಮಾನವರ ಅನಾಗರಿಕ ಸಂಸ್ಕ್ರತಿಯಾದ ಗೋ ಮಾಂಸ ಭಕ್ಷಣೆ ನಿಲ್ಲಬೇಕು. ಜಾಗತಿಕ ತಾಪಮಾನ ಎರಿಕೆ ಓಜೋನ್ ಪದರದ ರಂದ್ರ ವಿಸ್ತಾರಕ್ಕೆ ಗೋ ಮಾಂಸ ಭಕ್ಷಣೆಯು ಒಂದು ಕಾರಣ ಎಂದು ವಿಜ್ಞಾನಿಗಳು ಸಾರುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಸ್ವರ್ಣವಲ್ಲಿ ಶ್ರೀಗಳು ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಹೆಚ್.ಕೆ.ಪಾಟೀಲ್ ಮಾತನಾಡಿ ಅಗಡಿ ಮಠ ರೈತರ ಮಠ, ಒಕ್ಕಲಿಗರ ಮಠ ಅದಕ್ಕೆ ಜಾತಿಯ ಸೋಂಕಿಲ್ಲ. ಇಲ್ಲಿನ ಕಾರ್ಯಕ್ರಮಗಳು ರೈತರನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ನಡೆಯುತ್ತಿವೆ ಎಂದರು. ಕನ್ನಡದ ಒಂದು ಪತ್ರಿಕೆ ಶತಮಾನಕಾಲ ಬಾಳಿದೆ ಎಂಬುದು ನಂಬಲಾರದ ಸತ್ಯ. ಶೇಷಾಚಲ ಸದ್ಗೂರುಗಳು ಗಳಗನಾಥರು ,ಹಾರಾ ಪುರೋಹಿತ್ , ವೆಂಕಟೇಶ್ ಕುಲ್ಕರ್ಣಿ ಮೊದಲಾದವರು ಜನರಿಗೆ ಒಳಿತನ್ನು ಬಯಸುವ ಮನಸ್ಸುಗಳನ್ನು ಸದ್ಬೋಧ ಚಂದ್ರಿಕೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ಗಳಗನಾಥರ ವಿಚಾರ ಚಿಂತನೆ ಬರಹಗಳು ಜನರಿಗೆ ತಲುಪಲು ಸಾಂಘಿಕ ಪ್ರಯತ್ನ ಆಗಬೇಕು. ಹಂಪೆ ಅಥವಾ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಗಳಗನಾಥ ಅಧ್ಯಯನ ಪೀಠ ಸ್ಥಾಪಿಸಿ ಅವರ ಬದುಕು ಬರಹಗಳ ಸಂಶೋಧನೆಗೆ ಅವಕಾಶ ಕಲ್ಪಿಸಬೇಕು ಎಂದು ಪಾಟೀಲ್ ಹೇಳಿದರು. ಲೋಕ ಸಭಾ ಸದಸ್ಯ ಮಂಜುನಾಥ ಕುನ್ಹೂರು ಮಾತನಾಡಿ ಆನಂದವನ ಜನಜಾಗೃತಿಗಾಗಿ ನಡೆಸುತ್ತಿರುವ ಕಾರ್ಯ ಸ್ತುತ್ಯಾರ್ಹ. ಅಧಿಕಾರ ಶ್ರೀಮಂತಿಕೆ ಶಾಶ್ವತವಲ್ಲ. ಧರ್ಮದ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಂಡರೆ ಅದು ಎಲ್ಲ ಕಾಲ, ಎಲ್ಲ ಜನ್ಮಕ್ಕೂ ಸಾಗಿಬರುತ್ತದೆ ಎಂದರು.
ಶತಮಾನ ಪೂರೈಸುತ್ತಿರುವ ಶ್ರೀ ಶೇಷಾಚಲ ಸದ್ಗುರು ವೇದ ಸಂಸ್ಕೃತ ಪಾಠಶಾಲೆ ಕುರಿತು ಪರಕೀಯ ಹಾಗೂ ದೇಶೀಯ ಸರ್ಕಾರಗಳ ಅಸಹಕಾರವನ್ನು ತಡೆದುಕೊಂಡು ಈ ಸಂಸ್ಕೃತ ಶಾಲೆ ಉಳಿದಿರುವುದು ಶೇಷಾಚಲ ಸ್ವಾಮಿಗಳ, ಚಿದಂಬರ ಚಕ್ರವರ್ತಿಗಳ ಸಂಕಲ್ಪ ಶಕ್ತಿ ಹಾಗೂ ಸಿದ್ಧಿಯನ್ನು ಹೇಳುತ್ತದೆ. ಭಾರತ ಸರ್ಕಾರದಿಂದ ಸಂಸ್ಕೃತ ವಿಶೇಷ ಅನುದಾನ ನೀಡುವ ಅವಕಾಶವಿದ್ದು, ಅದನ್ನು ಇಲ್ಲಿಗೆ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ರಾಜ್ಯಪಾಲ ರಾಮಾಜೋಯಿಸ್ ಮಾತನಾಡಿ ಧರ್ಮ ಎಂದರೆ ಮತವಲ್ಲ. ನಾಲ್ಕು ವರ್ಣ, ನೂರಾರು ಜಾತಿಗಳಿದ್ದರೂ ಧರ್ಮ ಮಾತ್ರ ಒಂದೇ ಆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜನರ ಹೃದಯದಲ್ಲಿ ನೆಲೆಗೊಳ್ಳುತ್ತಾರೆ. ಸಿಟ್ಟು ಮಾಡದಿರುವುದು, ಸತ್ಯ ಹೇಳುವುದು, ಗಳಿಕೆಯನ್ನು ಸಮಾಜಕ್ಕೆ ಹಂಚಿ ತಿನ್ನುವುದು, ವೃದ್ಧರನ್ನು ಗೌರವಿಸುವುದು, ಅಂತರಂಗ, ಬಹಿರಂಗ ಶುದ್ಧಿಗಳನ್ನು ಪ್ರತಿಪಾದಿಸುವ, ಕಷ್ಟದಲ್ಲಿರುವವರನ್ನು ಸುಖ ಸಂತೋಷಗಳಿಂದ ಇರುವಂತೆ ಮಾಡುವ ಧರ್ಮವನ್ನು ಮುಂದಿನ ಪೀಳಿಗೆಗಳ ಮನಸ್ಸು ತುಂಬುವ ಕಾರ್ಯ ಆಗಬೇಕೆಂದು ಹಾರೈಸಿದರು.
ಆನಂದವನದ ಶ್ರೀ ಚಿದಂಬರ ಚಕ್ರವರ್ತಿಗಳು ಶ್ರೀ ಕ್ಷೇತ್ರದ ಧ್ಯೇಯ, ಕರ್ತವ್ಯ, ನಡೆದುಬಂದ ದಾರಿ ಕುರಿತು ಮುಂದಿನ ಯೋಜನೆಯ ಕುರಿತು ಆಶಯ ಭಾಷಣ ಮಾಡಿದರು.ಇದೇ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಸದ್ಗುರು ಪ್ರಶಸ್ತಿಯನ್ನು ಶ್ರೀಪಾದಭಟ್ಟರು ಸವದತ್ತಿ, ಶ್ರೀನಿವಾಸಭಟ್ಟ ಬನಶಂಕರಿ,ಅಜಿತ ಮಾಗಾವಿ ಹಾವೇರಿ,ಬಿ.ವಿ.ಮಳಗಿ ಹಾವೇರಿ , ಕೆ.ಆರ್.ಲೋಖಂಡೆ ಹಾವೇರಿ ಇವರಿಗೆ ಪ್ರಧಾನ ಮಾಡಿದರು. ಸುತ್ತ ಮುತ್ತಲ ಊರಿನ ಬಡರೈತರಿಗೆ ನೇಗಿಲು ದಾನವನ್ನು ಮಾಡಲಾಯಿತು.
ಸಭೆಯಲ್ಲಿ ಮಾಜಿ ಸಚಿವ ಎಮ್.ಎಮ್. ಹಿಂಡಸಗೇರಿ, ಲೋಕಸೇವಾ ಆಯೋಗದ ಅಧ್ಯಕ್ಷ ಡಾ. ನಾಗರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಿಮನಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಗುರುದತ್ತಮೂರ್ತಿ ಸ್ವಾಮೀಜಿ ಸ್ವಾಗತಿಸಿ, ವಂದಿಸಿದರು.












Click it and Unblock the Notifications