ಅಂಡರ್ ಪಾಸ್ ಉದ್ಘಾಟನೆಗೆ ಮೀನಾಮೇಷ
ಬೆಂಗಳೂರು,ಫೆ.18 : ಹಲವಾರು ವಿಘ್ನಗಳನ್ನು ಎದುರಿಸಿ ಕೊನೆಗೂ ಸಿದ್ಧವಾದ ಫಟಾಫಟ್ ಕಾವೇರಿ ಅಂಡರ್ ಪಾಸ್ಗೆ ಈಗ ಮತ್ತೊಂದು ವಿಘ್ನ ಎದುರಾಗಿದೆ. ರಾಜ್ಯಪಾಲರು ಅಧಿಕೃತವಾಗಿ ಉದ್ಘಾಟನೆ ಮಾಡಿದ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಬೇಕೆ? ಅಥವಾ ಈಗಲೇ ಸಂಚಾರಕ್ಕೆ ಅನುಮತಿ ನೀಡಬೇಕೆ? ಎಂಬ ದ್ವಂದ್ವ ಪರಿಸ್ಥಿತಿಯಲ್ಲಿದೆ ಬಿಬಿಎಂಪಿ. ಹಾಗಾಗಿ ರಸ್ತೆ ಕೆಳ ಸೇತುವೆಯ ಉದ್ಘಾಟನೆ ಅನಿಶ್ಚಿತವಾಗಿದೆ. ಸೋಮವಾರ ಇಲ್ಲಾ ಬುಧವಾರ ಸಂಚಾರಕ್ಕೆ ಮುಕ್ತವಾಗಬಹುದು.
ಬಿಬಿಎಂಪಿಯ 1.41 ಕೋಟಿ ರೂ. ಗಳ ಈ ಮಹತ್ವದ ಯೋಜನೆ 3 ದಿನಗಳ ದಾಖಲೆ ಸಮಯದಲ್ಲಿ ಸಿದ್ಧವಾಗಬೇಕಿತ್ತು. ಆದರೆ ಅಂಡರ್ ಪಾಸ್ 33 ದಿನಗಳನ್ನು ತೆಗೆದುಕೊಂಡಿದೆ. 40 ಲಕ್ಷ ರೂ. ಅಧಿಕ ಖರ್ಚಾಗಿದೆ. ರಸ್ತೆಯ ಗೋಡೆಗಳ ಮೇಲೆ ಜಾಹೀರಾತು ಹಾಕುವ ಮೂಲಕ ಖರ್ಚಾದ ಹಣವನ್ನು ಖಜಾನೆಗೆ ಪುನಃ ತುಂಬುವ ಯೋಜನೆ ಬಿಬಿಎಂಪಿಗೆ ಇದೆ.
ಒಂದು ವೇಳೆ ಫಟಾಫಟ್ ಅಂಡರ್ ಪಾಸ್ ಇಂದು ಉದ್ಘಾಟನೆಯಾಗದಿದ್ದ್ದ ಪಕ್ಷದಲ್ಲಿ ಬುಧವಾರಕ್ಕೆ ಮುಂದೂಡಲ್ಪಡುತ್ತದೆ. ಕಾರಣ ಉದ್ಘಾಟನೆಗೆ ಮಂಗಳವಾರ ಪ್ರಶಸ್ತವಾದ ದಿನ ಅಲ್ಲ ಎಂಬ ನಂಬಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯದು. ಅಂಡರ್ ಪಾಸ್ ಉದ್ಘಾಟನೆಯ ನಂತರ ಬಿಡಿಎ ಸರ್ಫೇಸ್ ಪಾಸ್ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಲಾಗುವುದು. ಈ ಕಾಮಗಾರಿ ಸುಮಾರು 40ದಿನ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)