ಉಡುಪಿ ರಥಬೀದಿಗೆ ಅಭೂತಪೂರ್ವ ಸರ್ಪಕಾವಲು
ಉಡುಪಿ, ಫೆ.4: ಉಗ್ರವಾದಿಗಳ ಬೆದರಿಕೆ ಇರುವ ಕಾರಣ ಉಡುಪಿಯ ಶ್ರೀಕೃಷ್ಣ ಮಠ, ದೇವಸ್ಥಾನ ಹಾಗೂ ರಥ ಬೀದಿಗೆ ಬಿಗಿ ಭದ್ರತೆ ಒದಗಿಸ ಬೇಕೆಂದು ಹಿಂದೂ ಸಂಘಟನೆಗಳು ಭಾನುವಾರ ಆಗ್ರಹಿಸಿವೆ.
ಭಯೋತ್ಪಾದಕರು ದಾಳಿ ಮಾಡಬಹುದೆಂಬ ಬೆದರಿಕೆಯ ಹಿನ್ನ್ನಲೆಯಲ್ಲಿ ದೇವಸ್ಥಾನ ಹಾಗೂ ಅಷ್ಟ ಮಠಗಳಿಗೆ ರಕ್ಷಣೆ ಒದಗಿಸಬೇಕೆಂದು ಹಲವಾರು ಬಾರಿ ಮನವಿ ಮಾಡಿದ್ದರೂ ಪೊಲೀಸರು ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಉಡುಪಿಯ ರಥ ಬೀದಿಯಲ್ಲಿ ಉಗ್ರರು ಅಷ್ಟ ಮಠ ಹಾಗೂ ಹಿಂದು ಸಂಸ್ಥೆಗಳನ್ನು ಕಾರ್ ಬಾಂಬ್ ಮೂಲಕ ದಾಳಿ ಮಾಡುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಆದ ಕಾರಣ ರಥ ಬೀದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂದು ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾದ ರಾಘವೇಂದ್ರ ಆಚಾರ್ಯ ತಿಳಿಸಿದರು.
ವಾಹನಗಳ ನಿಲುಗಡೆಗಾಗಿ 10 ಎಕರೆ ಪ್ರದೇಶವನ್ನು ರಾಜಾಂಗಣದ ಹಿಂಭಾಗದಲ್ಲಿ ಅಭಿವೃದ್ದಿ ಪಡಿಸಲಾಗಿದೆ. ರಥಬೀದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅಷ್ಟ ಮಠಾಧೀಶರು ಹಾಗೂ 47 ವರ್ತಕರು ಈ ವಿಚಾರವಾಗಿ ನಿರ್ಣಯ ಕೈಗೊಂಡು, ಅದರ ಪ್ರತಿಯೊಂದನ್ನು ಜಿಲ್ಲಾಧಿಕಾರಿಗಳು ಹಾಗೂ ಉಡುಪಿ ಪುರಸಭೆಯ ಅಧ್ಯಕ್ಷರಿಗೆ 1995ರಲ್ಲೇ ಕೊಟ್ಟಿರುವುದಾಗಿ ಅವರು ತಿಳಿಸಿದರು. ಈಗ ರಥಬೀದಿಯಲ್ಲಿ ಕಾನೂನು ಬಾಹಿರವಾಗಿ ರಸ್ತೆ ಬದಿ ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಟ್ಟು ಶ್ರೀಕೃಷ್ಣ ಮಠ , ದೇವಸ್ಥಾನ ಹಾಗೂ ರಥಬೀದಿಗೆ ಭದ್ರತೆ ಒದಗಿಸ ಬೇಕೆಂದು ಅವರು ಕೋರಿದರು.
ಭದ್ರತೆಯ ದೃಷ್ಟಿಯಿಂದ ರಥಬೀದಿಯಲ್ಲಿ 12ಅಡಿ ಪ್ರವೇಶದ್ವಾರ ಹಾಗೂ ಅಷ್ಟೇ ಎತ್ತರದ ಗೋಡೆಗಳನ್ನು ಕಟ್ಟಿಸಬೇಕು. ಹಾಗೂ ಅಲ್ಲಿನ ಚಲನ ವಲನಗಳ ಬಗ್ಗೆ ನಿಗಾ ಇಡಲು ಸಿಸಿ ಟಿವಿಗಳನ್ನು ಅಳವಡಿಸ ಬೇಕು ಎಂಬ ನಿಪುಣರು ಸಿದ್ಧಪಡಿಸಿದ ಯೊಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.
ಭದ್ರತೆಯ ವಿಚಾರವಾಗಿ ಹಿಂದೂ ಸಂಘಟನೆಗಳ ಗಣ್ಯರ ತಂಡವೊಂದು ಜಿಲ್ಲಾಧಿಕಾರಿ ಪಿ.ಹೇಮಲತಾ ಅವರನ್ನು ಶನಿವಾರ ಭೇಟಿಯಾಗಿತ್ತು. ಈ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಈಗ ಶ್ರೀಕೃಷ್ಣ ಮಠ ಹಾಗೂ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವುದಾಗಿ ಉಪ ಪೊಲೀಸ್ ಆಯುಕ್ತರಾದ ಎಂ.ಬಿ.ನಾಗರಾಜ್ ತಿಳಿಸಿದ್ದಾರೆ. ದೇವಸ್ಥಾನದ ಬಳಿ ಪೊಲೀಸ್ ಹೊರಠಾಣೆಯನ್ನು ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಇದೇ ರೀತಿ ನಾಡಿನ ಹಲವಾರು ದೇವಾಲಯಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಉಗ್ರವಾದಿ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಜನತೆ ಆತಂಕಗೊಂಡಿದ್ದಾರೆ.
(ದಟ್ಸ್ಕನ್ನಡ
ವಾರ್ತೆ)
ಹುಬ್ಬಳ್ಳಿಯ
ಉಗ್ರರ
ಬಳಿ
ಅತಿ
ಶಕ್ತಿಶಾಲಿ
ಸ್ಫೋಟಕ