ಎಂಪಿ ಪ್ರಕಾಶ್ ಚಿತ್ತ ಕಾಂಗ್ರೆಸ್ನತ್ತ?
ಬಳ್ಳಾರಿ, ಜ.19: ಜೆಡಿಎಸ್ ತೊರೆದ ನಂತರ ಬೇರೆ ಪಕ್ಷ ಸೇರಲು ಮೀನಾಮೇಷ ಎಣಿಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಬಿಜೆಪಿ ಬದಲು ಕಾಂಗ್ರೆಸ್ ಸೇರಲಿದ್ದಾರೆಯೇ?
ಕರ್ನಾಟಕ ರಾಜಕೀಯ ರಂಗದಲ್ಲಾಗುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಪ್ರಕಾಶ್ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಸೇರುವ ಸಾಧ್ಯತೆಯನ್ನೇ ಹೆಚ್ಚಾಗಿ ಧ್ವನಿಸುತ್ತಿವೆ.
ಬಿಜೆಪಿ ಸೇರಲು ಆಹ್ವಾನ ನೀಡಿದ್ದ ಬಿಜೆಪಿ, ಪ್ರಕಾಶ್ ಅವರ ವಿಳಂಬ ನೀತಿಯಿಂದ ಬೇಸತ್ತು ಬಂದರೆ ಬರಲಿ ಬಿಟ್ಟರೆ ಬಿಡಲಿ ಎಂದೂ ಹೇಳಿರುವುದು ಬಿಜೆಪಿಯಿಂದ ಪ್ರಕಾಶ್ ವಿಮುಖರಾಗಲು ಮುಖ್ಯ ಕಾರಣ ಹೇಳಲಾಗುತ್ತಿದೆ. ಬಳ್ಳಾರಿ ಗಣಿ ಧಣಿಗಳಾದ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರು ಪ್ರಕಾಶ್ ಸೇರಲು ಒಪ್ಪಿಗೆ ಹೇಳಿದ್ದರೂ ಹೃದಯಪೂರ್ವಕವಾಗಿ ಒಪ್ಪಿರಲಿಲ್ಲ. ಅಲ್ಲದೇ, ಪ್ರಕಾಶ್ ಅವರ ಮಗನೂ ಕೂಡ ಬಿಜೆಪಿ ಸೇರುವುದಕ್ಕೆ ವಿರೋಧಿಸಿದ್ದರು.
ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ, ಎಂ.ಪಿ.ಪ್ರಕಾಶ್ ಅವರ ಕೆಲ ಬೆಂಬಲಿಗರು ಕಾಂಗ್ರೆಸ್ ನಾಯಕರೊಡನೆ ಮಾತುಕತೆ ನಡೆಸುತ್ತಿರುವುದು ಕಾಂಗ್ರೆಸ್ ಸೇರುವ ವದಂತಿಗೆ ಪುಷ್ಟಿ ನೀಡಿದೆ.
ಪ್ರಕಾಶ್ ಮತ್ತು ಅವರ ಬೆಂಬಲಿಗರು ಯಾವುದೇ ಷರತ್ತು ವಿಧಿಸದೆ ಕಾಂಗ್ರೆಸ್ ಪಕ್ಷ ಸೇರುವುದಾದರೆ ಅವರನ್ನು ಸ್ವಾಗತಿಸುವುದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದು ಪ್ರಕಾಶ್ ಅವರ ಚಿತ್ತ ಕಾಂಗ್ರೆಸ್ನತ್ತ ಹೊರಳಲು ಕಾರಣವಾಗಿಬಹುದು. ಪ್ರಕಾಶ್ ಮತ್ತಿಬ್ಬರಿಗೆ ಮಾತ್ರ ಚುನಾವಣಾ ಟಿಕೆಟ್ ನೀಡುವುದಾಗಿ ಬಿಜೆಪಿ ಹೇಳಿರುವುದೂ ಆ ಪಕ್ಷದಿಂದ ವಿಮುಖರಾಗಲು ಪ್ರಮುಖ ಕಾರಣ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂದಿನ ವಾರ ತಾನು ಯಾವ ಪಕ್ಷ ಸೇರಲಿದ್ದೇನೆ ಎಂಬುದನ್ನು ತಿಳಿಸುವುದಾಗಿ ಪ್ರಕಾಶ್ ಹೇಳಿದ್ದಾರೆ. ಜೆಡಿಎಸ್ ಮತ್ತು ಬಿಎಸ್ಪಿ ಪಕ್ಷಗಳಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಅವು ಆಂತರಿಕ ಬಿಕ್ಕಟ್ಟಿನಿಂದ ತೊಳಲಾಡುತ್ತಿವೆ. ಈ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯ ಇಲ್ಲ ಎಂದು ಅವರು ಹೇಳಿದರು.
ಹಂಪಿ ಪ್ರತಿಷ್ಠಾನ ಆಯೋಜಿಸಿದ್ದ 'ಭೂತದಿಂದ ಭವಿಷ್ಯಕ್ಕೆ ವಿಜಯನಗರ" ಎಂಬ ಸಮಾವೇಶವನ್ನು ಉದ್ಘಾಟಿಸಿದ ನಂತರ ಸುದ್ದಿಗಾರ ಜತೆ ಮಾತನಾಡುತ್ತಿದ್ದರು.
(ದಟ್ಸ್ಕನ್ನಡ ವಾರ್ತೆ)