ವೆಬ್ಪುಟಗಳಲ್ಲಿ ಮಹಾಭಾರತ ವಿಶ್ವಕೋಶ
ಬೆಂಗಳೂರು, ಜ.05 : ಮಹಾಭಾರತ ನಮ್ಮ ದೇಶದ ಸಂಸ್ಕೃತಿಯ ಸರ್ವಸಾರವನ್ನು ಹಿಡಿದಿಟ್ಟುಕೊಂಡಿರುವ ಮಹಾಕಾವ್ಯ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ನ ನಿರ್ದೇಶಕ ಮತ್ತು ರಾಜ್ಯಸಭಾ ಸದಸ್ಯ ಡಾ.ಕಸ್ತೂರಿ ರಂಗನ್ ಬಣ್ಣಿಸಿದ್ದಾರೆ.
ಮಹಾಭಾರತ ವಿಶ್ವಕೋಶದ ಪ್ರಾದೇಶಿಕ ಸಂಪಾದಕರಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳು ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ದೇಶಿಸಿ ಶನಿವಾರ ಮಾತನಾಡುತ್ತಿದ್ದ ಅವರು ಮಹಾಭಾರತ ವಿಶ್ವಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಸಾಹಿತ್ಯಿಕ ಉಡುಗೊರೆ ಎಂದರು.
ಮಾನವನ ಪ್ರಯೋಜನಕ್ಕಾಗಿ ಇತಿಹಾಸತಜ್ಞರು ಉಪಗ್ರಹಗಳ ಸಹಾಯದಿಂದ ಉನ್ನತ ತಂತ್ರಜ್ಞಾನವನ್ನು ಬಳಸಿ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳಗಳ ಅಸ್ತಿತ್ವದ ಶೋಧನೆಯನ್ನು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸರಸ್ವತಿ ನದಿ ಶೋಧ ಪ್ರಕಲ್ಪ ಸಂಸ್ಥೆಯ ನಿರ್ದೇಶಕರಾದ ಡಾ.ಕಲ್ಯಾಣ ರಾಮನ್ ಅವರು ಮಾತನಾಡಿ, ಇಸ್ರೋ ಬಿಡುಗಡೆ ಮಾಡಿದ ಚಿತ್ರಗಳ ಸಹಾಯದಿಂದ ಸರಸ್ವತಿ ನದಿ ದಂಡೆಯಲ್ಲಿಯೇ ಮಹಾಭಾರತ ಯುದ್ಧ ನಡೆದದ್ದು ಎಂಬುದನ್ನು ಸಾಬೀತುಪಡಿಸಬಹುದು ಎಂದರು.
ದೇಶದಾದ್ಯಂತ ಸಾಕಷ್ಟು ವಿವಾದಕ್ಕೆ, ಚರ್ಚೆಗೆ ಕಾರಣವಾಗಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ರಾಮಸೇತು ಇದ್ದದ್ದು ನೂರಕ್ಕೆ ನೂರು ಸತ್ಯ. ಭೌಗೋಲಿಕ ಏರುಪೇರಿನಿಂದಾಗಿ ಅದು ಸಮುದ್ರದಲ್ಲಿ ಮುಳುಗಿದೆ ಎಂದು ಅವರು ಹೇಳಿದರು.
(ಯುಎನ್ಐ)