ಬಣ್ಣದಲೋಕ ತೆರೆದಿದೆ ಬಾ ಅತಿಥಿ!
ಬೆಂಗಳೂರು, ಜ.4: ಚಿತ್ರರಸಿಕರ ಮನಸೂರೆಗೊಳ್ಳುವ ಹಬ್ಬ ಮತ್ತೆ ಬಂದಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ವೈವಿಧ್ಯಮಯ ಸಿನಿಮಾಗಳು ಬೆಳ್ಳಿತೆರೆಯನ್ನು ಬೆಳಗಲಿವೆ. ನಟ/ನಟಿ, ನಿರ್ದೇಶಕ, ಛಾಯಾಗ್ರಾಹಕರಾಗುವ... ಕನಸು ಹೊತ್ತವರಿಗೆ ಈ ಅಪೂರ್ವ ಅವಕಾಶ ಸಿಗಬೇಕೆಂದರೆ ಮತ್ತೆ ವರ್ಷ ಕಾಯಬೇಕು. ತಡ ಯಾಕೆ? ಬಣ್ಣದ ಲೋಕಕ್ಕೆ ಬನ್ನಿ ಎಂದು ಕೈಬೀಸಿ ಕರೆಯುತಿದೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಬಣ್ಣದಲೋಕವನ್ನು ಗುರುವಾರ (ಜ.3) ರಾಜ್ಯಪಾಲ ರಾಮೇಶ್ವರ್ ಠಾಕೂರ್ ಉದ್ಘಾಟಿಸಿದರು.ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಚಲನಚಿತ್ರೋತ್ಸವವನ್ನು ಆಯೋಜಿಸಿವೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಠಾಕೂರ್, ಕಳೆದ ವರ್ಷದಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಚರಿಸುತ್ತಾ ಬಂದಿದ್ದು, ಈ ಬಾರಿ 45 ದೇಶಗಳ 140 ಚಲನಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಕೇಂದ್ರ ಸರ್ಕಾರ ಗೋವಾದಲ್ಲೇ ಶಾಶ್ವತವಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನು ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ ನಂತರ ಹಲವು ರಾಜ್ಯಗಳು ತಮ್ಮದೇ ನೆಲದಲ್ಲಿ ಈ ರೀತಿಯ ಚಲನಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪ್ರತಿಯೊಂದು ದೇಶದ ಬೆಳವಣಿಗೆಯಲ್ಲೂ ಆ ದೇಶದ ಚಲನಚಿತ್ರಗಳು ಮುಖ್ಯ ಪಾತ್ರ ವಹಿಸುತ್ತವೆ. ಚಲನಚಿತ್ರಗಳೇ ಇಲ್ಲದಿದ್ದರೆ ಏನೋ ಕೊರತೆ ಇದ್ದಂತೆ. ಇಂತಹ ಉತ್ಸವಗಳು ಚಲನಚಿತ್ರಗಳನ್ನು ಶ್ರೀಮಂತಗೊಳಿಸುತ್ತವೆ ಎಂದರು ಖ್ಯಾತ ಚಿತ್ರ ನಿರ್ದೇಶಕ ಆಡೂರು ಗೋಪಾಲಕೃಷ್ಣನ್.
ಸಮಾರಂಭದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ, ಭಾರತೀಯ ಚಲನಚಿತ್ರ ಮಹಾಮಂಡಲ ಉಪಾಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್, ನಟಿ ಜಯಮಾಲಾ, ತಾರಾ, ನಟ ಶಿವರಾಜ್ಕುಮಾರ್, ಗಣೇಶ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಮತ್ತಷ್ಟು ವಿವರಗಳಿಗೆ ಈ ಕೊಂಡಿ ಬಳಸಿ: http://www.suchitrafest.in/
(ದಟ್ಸ್ಕನ್ನಡ ವಾರ್ತೆ)