ಜ.1 ವಿವಾದ ಇತ್ಯರ್ಥ: ಪುತ್ತಿಗೆ ಶ್ರೀ
ಉಡುಪಿ, ಡಿ.28: ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿಗಳು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ವಿವಾದವನ್ನು ಬಗೆಹರಿಸಿಕೊಳ್ಳುವುದಾಗಿ ಶುಕ್ರವಾರ (ಡಿ.28) ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಉಡುಪಿಯ ಅದಮಾರು ಮಠದ ವಿಭೂಷಣ ತೀರ್ಥ ಸ್ವಾಮಿಗಳ ಸತ್ಕಾರವನ್ನು ಸ್ವೀಕರಿಸಿ ಅವರೊಂದಿಗೆ ಮಾತನಾಡಿದ್ದೇನೆ. ಜ.18ರ ಪರ್ಯಾಯ ಪೀಠಾರೋಹಣ ವಿವಾದ ಬಗೆಹರಿಯಲಿದೆ ಎಂದು ಅವರು ಅಭಯ ನೀಡಿದ್ದಾಗಿ ಪುತ್ತಿಗೆ ಶ್ರೀಗಳು ಹೇಳಿದರು. ಜ.1ರಂದು ಅದಮಾರು ಶ್ರೀಗಳ ನೇತೃತ್ವದಲ್ಲಿ ಉಳಿದ ಎಲ್ಲ ಸ್ವಾಮಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಅಂದು ಎಲ್ಲ ವಿವಾದಗಳು ಬಗೆಹರಿಯುತ್ತವೆ ಎಂಬ ಭರವಸೆಯನ್ನು ಪುತ್ತಿಗೆ ಶ್ರೀಗಳು ವ್ಯಕ್ತಪಡಿಸಿದ್ದಾರೆ.
ಮಾಧ್ವ ತತ್ವಗಳನ್ನು ಪ್ರಚಾರ ಮಾಡುವ ಸಲುವಾಗಿ ವಿದೇಶ ಯಾತ್ರೆ ಮಾಡಿದ್ದಾಗಿ 'ಸಾಗರೋಲ್ಲಂಘನವನ್ನು' ಸಮರ್ಥಿಸಿಕೊಂಡ ಪುತ್ತಿಗೆ ಶ್ರೀಗಳು, ಕೃಷ್ಣ ಮಠದಲ್ಲಿ ಪೂಜೆ ಮಾಡದಂತಹ ತಪ್ಪು ತಾವು ಮಾಡಿಲ್ಲ ಎಂದು ಹೇಳಿದರು. ವಿದೇಶ ಯಾತ್ರೆಗೂ ಶ್ರೀಕೃಷ್ಣ ಪೂಜೆಗೂ ಯಾವುದೇ ಸಂಬಂಧವಿಲ್ಲ ಎಂದು ವಿಭೂಷಣ ತೀರ್ಥ ಸ್ವಾಮಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪುತ್ತಿಗೆ ಶ್ರೀ ಪುರಪ್ರವೇಶ
ಸ್ವರ್ಣ ಪಲ್ಲಕ್ಕಿಯಲ್ಲಿ ಮಠದ ಪಟ್ಟದ ದೇವರು ಉಪೇಂದ್ರ ವಿಠಲ, ಪ್ರಭಾವಳಿ ಸಹಿತ ಅಲಂಕೃತವಾಹನದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪುರ ಪ್ರವೇಶದ ಮೆರವಣಿಗೆ ವೈಭವದಿಂದ ನಡೆಯಿತು. ಸಂಜೆ 6.55ಕ್ಕೆ ಪುತ್ತಿಗೆ ಮಠ ಪ್ರವೇಶಿಸಿದರು. ಪುರಪ್ರವೇಶ ಮಾಡಿದ ಸಂದರ್ಭ ಅವರನ್ನು ನಾಗರಿಕರು ಅದ್ದೂರಿಯಾಗಿ ಸ್ವಾಗತಿಸಿದರು.
(ದಟ್ಸ್ಕನ್ನಡ ವಾರ್ತೆ)