ಯುವರಾಜ, ಮಹಾರಾಜರ ಭರ್ಜರಿ ಆಟಕ್ಕೆ ಗರಿಗೆದರಿದ ಭಾರತ
ಬೆಂಗಳೂರು, ಡಿ.08 : ಭಾರತ ಕ್ರಿಕೆಟ್ ತಂಡದ ಮಹಾರಾಜ ಮತ್ತು ಯುವರಾಜರಿಬ್ಬರ ಬ್ಯಾಟಿಂಗ್ ಅಬ್ಬರಕ್ಕೆ ಬೌಲಿಂಗ್ ಮೊನಚಿಲ್ಲದ ಪಾಕ್ ತಂಡ ಮತ್ತೆ ನಲುಗಿದೆ.
ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದ ಮೊದಲ ದಿನ 'ಮಹಾರಾಜ' ಸೌರವ್ ಗಂಗೂಲಿ ಮತ್ತು 'ಯುವರಾಜ' ಸಿಂಗ್ ಸಮಯೋಚಿತ ಶತಕದಿಂದ ಭಾರತದ ಇನ್ನಿಂಗ್ಸ್ಗೆ ಕಸುವನ್ನು ತುಂಬಿದ್ದಾರೆ.
ಬೆಳಿಗ್ಗೆ 61 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಪಾಕ್ಗೆ ಒಪ್ಪಿಸಿದಾಗ ಇನ್ನಿಂಗ್ಸ್ ಇಂದೇ ಮುಗಿಯುವುದೆಂಬ ಚಳಿ ಕ್ರಿಕೆಟ್ ಪ್ರೇಮಿಗಳಲ್ಲಿ ಆವರಿಸಿಕೊಂಡಿತ್ತು. ನಂತರ ಜೊತೆಗೂಡಿದ ಸೌರವ್ ಮತ್ತು ಯುವಿ ಎಚ್ಚರಿಕೆ, ಆಕ್ರಮಣ ಮಿಶ್ರಿತ ಆಟವಾಡಿ ಭಾರತೀಯ ತಂಡಕ್ಕೆ ಹಿಡಿದಿದ್ದ ಚಳಿಯನ್ನು ಬಿಡಿಸಿದ್ದಾರೆ.
ಕೊಲ್ಕೊತ್ತಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ ಶತಕ ಬಾರಿಸಿದ್ದ ಸೌರವ್ ತಾವಿನ್ನೂ ಭಾರತ ಕ್ರಿಕೆಟ್ ತಂಡದ ಶಕ್ತಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಾಮಿ, ಅರಾಫತ್ರನ್ನು ಮನಸೋಯಿಚ್ಛೆ ದಂಡಿಸಿದ ಸೌರವ್ 20 ಬೌಂಡರಿಗಳ ಸಹಾಯದಿಂದ 125 ರನ್ ಗಳಿಸಿ ಇನ್ನೂ ಆಟವಾಡುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅವಗಣನೆಗೀಡಾಗುತ್ತ ಬಂದಿದ್ದ ಯುವರಾಜ್ ತಾವು ಟೆಸ್ಟ್ ಕ್ರಿಕೆಟ್ಗೆ ಸೈ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸತ್ವಯುತ ಬ್ಯಾಟಿಂಗ್ ಪ್ರದರ್ಶಿಸಿದ ಯುವಿ 28 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 169 ರನ್ ಗಳಿಸಿದರು. ಇಬ್ಬರೂ ಐದನೇ ವಿಕೆಟ್ ಜೊತೆಯಾಟದಲ್ಲಿ 200 ರಸ್ ಸೇರಿಸಿ ಭಾರತವನ್ನು ಅಪಾಯದ ಸುಳಿಯಿಂದ ಪಾರುಮಾಡಿದರು.
ಪಾಕ್ ಪರ ಮೂರು ವಿಕೆಟ್ ಕಬಳಿಸಿದ ಅರಾಫತ್ ಮತ್ತು ಎರಡು ವಿಕೆಟ್ ಬುಟ್ಟಿಗೆ ಹಾಕಿಕೊಂಡ ಸಾಮಿ ಯಶಸ್ವಿ ಬೌಲರ್ ಎನಿಸಿದ್ದಾರೆ. ಶೋಯಾಬ್ ಅಖ್ತರ್ ಬೌಲಿಂಗ್ ದಾಳಿಯ ಮೊನಚಿಲ್ಲದೆ ಒದ್ದಾಡುತ್ತಿರುವ ಪಾಕ್ ದಾಳಿಗೆ ಕನೇರಿಯಾ ಕೂಡ ಲೆಗ್ ಕಟ್ಟರ್ಗಳಿಂದ ಯಾವುದೇ ಪರಿಣಾಮ ಬೀರಲಿಲ್ಲ.
ದಿನದಾಟದ ಕೊನೆಗೆ 90 ಓವರ್ಗಳಲ್ಲಿ 4 ರನ್ ಸರಾಸರಿ ಆಧಾರದ ಮೇಲೆ 365 ರನ್ ಪೇರಿಸಿರುವ ಭಾರತ ಅತ್ಯಂತ ಸುಸ್ಥಿತಿಯಲ್ಲಿದೆ.
(ದಟ್ಸ್ಕ್ಕ್ರಿಕೆಟ್ ವಾರ್ತೆ)