ಜೀ ಕನ್ನಡದಲ್ಲಿ ಅನಂತ್ ಚಿನಿವಾರ್ ಸಾರಥ್ಯದಲ್ಲಿ 'ಅಖಾಡ'
ಬೆಂಗಳೂರು, ಡಿ.7 : ಕರ್ನಾಟಕದ ರಾಜಕಾರಣಿಗಳನ್ನು ನೇರ ಚರ್ಚೆಗೆ ಜನತೆಯ ಎದುರು ನಿಲ್ಲಿಸಿದ್ದ ಜೀ ಕನ್ನಡದ ಪ್ರಸಿದ್ಧ ಕಾರ್ಯಕ್ರಮ 'ಅಖಾಡ'ಮತ್ತೊಮ್ಮೆ ಪ್ರಾರಂಭವಾಗುತ್ತಿದೆ. ಡಿಸೆಂಬರ್ 19ರಿಂದ ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ 11ಗಂಟೆಯವರೆಗೆ ಪ್ರಸಾರವಾಗಲಿದೆ. ಈ ಬಾರಿ 'ಅಖಾಡ'ಚರ್ಚೆಯ ಸಾರಥ್ಯವನ್ನು ಇತ್ತೀಚೆಗಷ್ಟೇ ಸುವರ್ಣ ಚಾನೆಲ್ ನಿಂದ ಹೊರಬಂದಿರುವ ಖ್ಯಾತ ಪತ್ರಕರ್ತ ಅನಂತ ಚಿನಿವಾರ ವಹಿಸಲಿದ್ದಾರೆ.
ನೇರ ಚರ್ಚೆ ಮತ್ತು ಮಾತುಕತೆಯ ಕಾರ್ಯಕ್ರಮವಾಗಿರುವ ಈ ಕಾರ್ಯಕ್ರಮದಲ್ಲಿ ಒಂದೊಂದು ಕ್ಷೇತ್ರದಲ್ಲಿಯ ಭಾವಿ ಶಾಸಕ, ಮಾಜಿ ಶಾಸಕ, ಚುನಾವಣೆಯಲ್ಲಿ ಸೋತ ರಾಜಕಾರಣಿಗಳನ್ನು ಮತ್ತು ಆ ಕ್ಷೇತ್ರದ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಚರ್ಚೆಗೆ ಆಹ್ವಾನಿಸಲಾಗುತ್ತದೆ.
ಕ್ಷೇತ್ರದ ಶಾಸಕ ಚುನಾವಣೆಗೆ ಮೊದಲು ಜನತೆಗೆ ನೀಡಿದ ಆಶ್ವಾಸನೆಗಳು, ಹಾಗೂ ಆ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಕುರಿತು ನೇರವಾಗಿ ಜನರಿಂದ ಹಾಗೂ ಹಾಲಿ ಶಾಸಕನ ಎದುರು ಮಾಜಿ ಹಾಗೂ ಇತರರಿಂದ ನೇರ ಚರ್ಚೆ ಮಾಡಲಾಗುತ್ತದೆ.
ಇದು ಜನಸೇವಕರ ಕೆಲಸದ ಕುರಿತು ನೇರ ಚರ್ಚೆಯ ವೇದಿಕೆ. ಸಾರ್ವಜನಿಕರು ತಾವು ಆಯ್ಕೆ ಮಾಡಿ ಕಳುಹಿಸಿದ ಶಾಸಕರೆದುರು ನೇರವಾಗಿ ತಮ್ಮ ಕುಂದು ಕೊರತೆಗಳ ಬಗ್ಗೆ ಚರ್ಚಿಸಬಹುದು. ಪ್ರಜಾಪ್ರಭುತ್ವದ ನಾಯಕರನ್ನು ನೇರವಾಗಿ ಜನತೆಯ ಮುಂದಿರಿಸುವ ಮೂಲಕ ಅವರ ಕರ್ತವ್ಯ ಪ್ರಜ್ಞೆಯನ್ನು ಜಾಗೃತವಾಗಿರಿಸುವ ಕಾರ್ಯವನ್ನು ಈ ಕಾರ್ಯಕ್ರಮ ಮಾಡುತ್ತದೆ ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಫ್ ಚಂದ್ರಶೇಖರನ್ ತಿಳಿಸಿದ್ದಾರೆ.
ಕಾರ್ಯಕ್ರಮ ನಿರೂಪಕರ ಕಿರು ಪರಿಚಯ : ಅನಂತ ಚಿನಿವಾರ, ಇವರು ಸುಮಾರು ಹತ್ತು ವರ್ಷಗಳಿಂದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ಅಭಿಮಾನಿ ಪತ್ರಿಕೆಯಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದ ಇವರು, ಸ್ಟಾರ್ ಆಪ್ ಮೈಸೂರ್, ಟಿವಿ ಟುಡೆ, ಇಂಡಿಯನ್ ಎಕ್ಸ್ಪ್ರೆಸ್, ದಿನತಂತಿ, ಉದಯ ಟಿವಿ, ಸುಪ್ರಭಾತ, ಏಶಿಯಾನೆಟ್ ಸುವರ್ಣ ಮತ್ತು ಇತ್ತೀಚೆಗೆ ಇವರು ಓ ಮನಸೆ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕದ ಹೆಚ್ಚಿನ ಎಲ್ಲ ವಾಹಿನಿಗಳಿಗೂ ಇವರು ಪ್ರಸ್ತುತ ಹಾಗೂ ರಾಜಕೀಯ ವಿಷಯಗಳ ಕುರಿತು ಉತ್ತಮ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಇವರ ನಿರ್ದೇಶನದಲ್ಲಿ ತಯಾರಾದ 50ಪ್ರಸಿದ್ಧ ಕನ್ನಡಿಗರ ಕುರಿತ ವ್ಯಕ್ತಿಚಿತ್ರಣ ಸರಣಿ ಪ್ರಸಿದ್ದವಾದುದು.
(ದಟ್ಸ್ ಕನ್ನಡ ವಾರ್ತೆ)