ಶನಿವಾರ ಸಂಜೆ ಕೆಂಪುತೋಟದ ಕಡೆಗೆ ಬಂದು ಹೋಗಿ
ಬೆಂಗಳೂರು, ಡಿ.7 : ಸುವರ್ಣ ಕರ್ನಾಟಕ ಆಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿರುವ "ಜಾನಪದ ಜಾತ್ರೆ" ವಾರಾಂತ್ಯದಲ್ಲಿ ನಡೆಯಲಿದೆ. ಅಂದರೆ ಡಿ. 8 ಹಾಗೂ 9 ರಂದು ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಲಾಲ್ಬಾಗ್ನಲ್ಲಿ ಜಾನಪದ ಸಂಭ್ರಮ ಮೇಳೈಸಲಿದೆ.
ಈ ಕಾರ್ಯಕ್ರಮದಲ್ಲಿ ಕಡೂರು ತಾಲೂಕು ಕಾಮನಕೆರೆ ಸರ್ಕಾರಿ ಪ್ರೌಢಶಾಲೆಯ ತಂಡದವರಿಂದ ಮಹಿಳಾ ವೀರಗಾಸೆ, ಉಡುಪಿ ಜಿಲ್ಲೆ ಕೂರಾಡಿಯ ಬಿ.ಎನ್.ಎಂ. ಹೈಸ್ಕೂಲ್ ತಂಡದವರಿಂದ ಮರಾಠಿ ಕೋಲಾಟ, ಕೋಡಿಬೇಂಗ್ರೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಧಮಿಕ ಶಾಲೆ ಮಕ್ಕಳಿಂದ ಡೊಳ್ಳು ಕುಣಿತ, ಹಾಸನ ಜಿಲ್ಲೆ ತೊಡ್ಡಬೀಕನಹಳ್ಳಿ ಗಜಾನನ ಪ್ರೌಢಶಾಲೆಯ ಜಡೆ ಕೋಲಾಟ, ಮೈಸೂರಿನ ಆದಿ ದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಕಲಾ ತಂಡದವರಿಂದ ನಗಾರಿ, ನೆಲಮಂಗಲದ ಜಾಗೃತಿ ಸಾಂಸ್ಕೃತಿಕ ವೇದಿಕೆಯಿಂದ ತಮಟೆ/ಚೌಡಿಕೆ, ಚಾಮರಾಜನಗರ ರಾಮಸಮುದ್ರದ ತಂಡದಿಂದ ಗೊರವರ ಕುಣಿತ ಇರುತ್ತದೆ.
ಅಲ್ಲದೇ, ಮಡಿಕೇರಿಯ ಅಪ್ಪಚ್ಚುಕವಿ ಮಹಾವಿದ್ಯಾಲಯ ತಂಡದಿಂದ ಹುತ್ತರಿ ಕೋಲಾಟ ಮತ್ತು ಉಮ್ಮತ್ತಾಟ, ಬೆಂಗಳೂರಿನ ಹೆಬ್ಬಣಿಲಿಂಗಯ್ಯ ಮತ್ತು ತಂಡದವರಿಂದ ಕಂಸಾಳೆ, ಗಿರಿಯಾಪುರದ ಗುರುದೃಪ ಪ್ರೌಢಶಾಲೆಯಿಂದ ವೀರಗಾಸೆ, ತುಮಕೂರು ಜಿಲ್ಲೆ ಮಧುಗಿರಿಯ ತಂಡದವರಿಂದ ಚಕ್ಕೆಭಜನೆ, ಸಾಗರ ಹೆಗ್ಗೋಡು ಹೆಣ್ಣುಮಕ್ಕಳ ತಂಡದಿಂದ ಹಾಲಕ್ಕಿ ಸುಗ್ಗಿ ಕುಣಿತ, ಸಿಂಧನೂರಿನ ಅಲಾಯಿ ಹೆಜ್ಜೆ ಕುಣಿತ, ಸವದತ್ತಿ ಅರಳಿಕಟ್ಟೆಯ ಶಾಲಾ ಮಕ್ಕಳಿಂದ ಸುಗ್ಗಿ ನೃತ್ಯ, ಸಾಗರ ತಾಲ್ಲೂಕು ಬೆಳಲ್ಮಕ್ಕೆ ಶಾಲಾಮಕ್ಕಳಿಂದ ಲಂಬಾಣಿ ನೃತ್ಯ, ಬೆಂಗಳೂರಿನ ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಮತ್ತು ಹುನಗುಂದ ತಾಲ್ಲೂಕು ಬಾದವಾಡಿಗೆ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯವರು ಜಾನಪದ ನೃತ್ಯ ಪ್ರದರ್ಶಿಸಲಿದ್ದಾರೆ.
ಈ ಬಾರಿಯ ಜಾನಪದ ಜಾತ್ರೆಯು ಹೊಸ ಆವಿಷ್ಕಾರದೊಂದಿಗೆ ಜನರನ್ನು ಆಕರ್ಷಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)