ನ್ಯಾನೋ ಟೆಕ್ನಾಲಜಿಯ ಮಹತ್ವ ಬಣ್ಣಿಸಿದ ಸಿಎನ್ಆರ್ ರಾವ್
ಬೆಂಗಳೂರು, ಡಿ.7 : ವಿಜ್ಞಾನಿ ಪ್ರೊ.ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ (ಸಿಎನ್ಆರ್) ಅವರಿಗೆ 'ಬೆಂಗಳೂರು ನ್ಯಾನೋ ರಾಷ್ಟ್ರೀಯ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು.
ನಗರದಲ್ಲಿ ಗುರುವಾರ ಪ್ರಾರಂಭವಾದ ಪ್ರಥಮ 'ಬೆಂಗಳೂರು ನ್ಯಾನೋ 2007" ಸಮ್ಮೇಳನದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ವಿಜ್ಞಾನದ ಹಲವಾರು ಕ್ಷೇತ್ರಗಳಲ್ಲಿ ನ್ಯಾನೋ ಪ್ರಯೋಜನಕಾರಿಯಾಗಲಿದೆ. ನ್ಯಾನೋ ತಂತ್ರಜ್ಞಾನದಿಂದ ಭವಿಷ್ಯ ಬದಲಾಗಲಿದೆ. ಆದರೆ ಹೇಗೆ ಎನ್ನುವುದು ತಿಳಿದಿಲ್ಲ. ಈ ಒಂದು ಅನಿಶ್ಚಿತತೆಯೇ ನ್ಯಾನೋ ಕ್ಷೇತ್ರವನ್ನು ಮತ್ತಷ್ಟು ರೋಚಕಗೊಳಿಸಿದೆ. ಈ ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಯುವ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡಿದ್ದರೆ ಹೆಚ್ಚು ಖುಷಿಪಡುತ್ತಿದ್ದೇನೇನೋ. ಕರ್ನಾಟಕ ಪ್ರೀತಿ ಮತ್ತು ಮಮತೆಯಿಂದ ನೀಡುತ್ತಿರುವುದರಿಂದ ಸ್ವೀಕರಿಸುತ್ತಿದ್ದೇನೆ ಎಂದು ರಾವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನ್ಯಾನೋ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ 14 ಎಕರೆ ಪ್ರದೇಶವನ್ನು ನೀಡಿ ಪ್ರೋತ್ಸಾಹಿಸಿದೆ. ಹೊಸ ನ್ಯಾನೋ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯನ್ನು ಜವಹಾರ್ಲಾಲ್ ನೆಹರು ಆಧುನಿಕ ವೈಜ್ಞಾನಿಕ ಸಂಶೋಧನೆಗಳ ಕೇಂದ್ರದ ಮಾರ್ಗದರ್ಶನದಲ್ಲಿ ನಿರ್ಮಿಸಲಾಗುವುದು. ಕೇಂದ್ರ ಸರ್ಕಾರದ 100 ಕೋಟಿ ರೂಗಳ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ರಾಮೇಶ್ವರ್ ಠಾಕೂರ್ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)