ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಹುಡುಗರು
ಬೆಂಗಳೂರು, ಡಿ.5 : ಕರುಳಿಂಡುವ ಚಳಿಯ ಮಧ್ಯೆ, ಬೆಂಗಳೂರಿನಲ್ಲಿ ಕ್ರಿಕೆಟ್ ಜ್ವರದ ಕಾವು ಹೆಚ್ಚುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್, ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.8ರಿಂದ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ರಾಜಧಾನಿಗೆ ಬುಧವಾರ(ಡಿ.5) ಬೆಳಗ್ಗೆ ಬಂದಿಳಿದರು.
ಬೆಂಗಳೂರಿಗೆ ಕಾಲಿಟ್ಟ ಸಚಿನ್ ತೆಂಡಲ್ಕೂರ್, ಸೌರವ್ ಗಂಗೂಲಿ, ಜಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಇಂದು ಸ್ವಾಗತಿಸಲಾಯಿತು. ಪಾಕ್ ತಂಡದ ಶೋಯಿಬ್ ಅಖ್ತರ್ ಸಹಾ ಇಂದು ಆಗಮಿಸಿದರು. ಟೀಮ್ ಇಂಡಿಯಾ ನಾಯಕ ಅನಿಲ್ ಕುಂಬ್ಳೆ ಅವರ ತವರು ನೆಲದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯ ಹೆಚ್ಚಿನ ಮಹತ್ವ ಪಡೆದಿದೆ.
ಈಗಾಗಲೇ ಇಂಡಿಯನ್ ಆಯಿಲ್ ಕಪ್ ಸರಣಿಯಲ್ಲಿ ಭಾರತ ಒಂದಂಕ(1 : 0)ಮುನ್ನಡೆ ಸಾಧಿಸಿದೆ. ಮೊನ್ನೆ ಕೋಲ್ಕತ್ತಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡು, ಟೀಂ ಇಂಡಿಯಾ ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ವಂಚಿತವಾಗಿದೆ. ಏನೇ ಆಗಲಿ, ಮೂರನೇ ಮತ್ತು ಅಂತಿಮ ಟೆಸ್ಟನ್ನು ಗೆದ್ದೇ ತೀರುತ್ತೇವೆ ಎಂಬ ಉತ್ಸಾಹದಲ್ಲಿ ಭಾರತದ ಹುಡುಗರು ಲವಲವಿಕೆ ಪ್ರದರ್ಶಿಸುತ್ತಿದ್ದಾರೆ.
ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಭಾರೀ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಡಿ.12ರ ತನಕ ಟೆಸ್ಟ್ ಪಂದ್ಯ ನಡೆಯಲಿದೆ. ಭಾನುವಾರದ ವೇಳೆಗಾದರೂ ಚಳಿ ಮಳೆ ಬಿಟ್ಟರೆ ಆಟಕ್ಕೆ ಹವೆಯ ಕಾಟ ತಪ್ಪುತ್ತದೆ.
(ದಟ್ಸ್ ಕ್ರಿಕೆಟ್ ವಾರ್ತೆ)