ಬೆಂಗಳೂರಿಗೆ ಕುಳಿರ್ಗಾಳಿ ಚಳಿಯಿಂದ ಮುಕ್ತಿ ಎಂದೋ ತಂದೆ?
ಬೆಂಗಳೂರು, ಡಿ. 5 : ಕಳೆದ ಮೂರು ದಿವಸಗಳಿಂದ ಬೆಂಗಳೂರಿನಲ್ಲಿ ಮೋಡ ಕವಚಿಕೊಂಡು ಬಿದ್ದಿದೆ.ಸೂರ್ಯನಿಗೆ ಈಗ ವಿಂಟರ್ ವೆಕೇಶನ್. ಊರಿಗೆಲ್ಲ ಕುಳಿರ್ ಗಾಳಿ, ಚಳಿ, ಶೀತ ಅಮರಿಕೊಂಡಿದೆ. ಯಾಕೆ? ಆಫೀಸಿಗೆ ರಜಾ ಹಾಕದೆ ಮನೆಯಲ್ಲಿರುವುದಕ್ಕೆ, ನೆಗಡಿ ಜ್ವರದಿಂದ ಬಳಲುವುದಕ್ಕೆ,ಮನೆಪಕ್ಕ ಇರುವ ಡಾಕ್ಟರ್ ಶಾಪ್ ಗೆ ಹೋಗಿಬಂದು ಮಾಡುವುದಕ್ಕೆ, ಹೊತ್ತುಗೊತ್ತಿನ ಪರಿವೆಯಿಲ್ಲದೆ ಶರಾಬು ಅಂಗಡಿಗೆ ಹೋಗುವುದಕ್ಕೆ, ಹಳೆ ಸ್ವೆಟರ್ ಹುಡುಕುವುದಕ್ಕೆ , ಹೊಸ ಆಡ್ ಕೋಟು ತರುವುದಕ್ಕೆ, ಮಫ್ಲರ್ ಡ್ರೈಕ್ಲೀನ್ ಗೆ ಕೊಟ್ಟುಬರುವುದಕ್ಕೆ, ಸ್ಕಾರ್ಫ್ ಕಟ್ಟಿಕೊಂಡು ಹವಾಯಿ ಚಪ್ಪಲಿ ತೊಟ್ಟುಕೊಂಡು ಮನೆಯಲ್ಲಿ ಮೆಣಸಿನಸಾರು ಮಾಡುವುದಕ್ಕೆ, ಇಷ್ಟಪಾತ್ರರೊಂದಿಗೆ ರಗ್ಗು ಹೊದ್ದು ಮಲಗುವುದಕ್ಕೆ, ಟೆರೇಸ್ ಮೇಲೆ ಹಾಕಿರುವ ಬಟ್ಟೆ ಒಣಗದಿರುವುದಕ್ಕೆ !
ಬೆಂಗಳೂರಿನ ಹವಾಗುಣದ ಬಗೆಗಿನ ಹಳೆ ಗಾದೆ ನಿಮಗೆ ಗೊತ್ತಿರಬಹುದು. ತಮಿಳುನಾಡಿನಲ್ಲಿ ವಾಂತಿ ಆದರೆ ಕರ್ನಾಟಕದಲ್ಲಿ ಬೇಧಿ ಅಂತ.ಈ ಬಾರಿಯೂ ಅದೇ ಆಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರಕುಸಿತ ಪರಿಣಾಮ ನಮ್ಮ ಬೆಂಗಳೂರಿನ ಒಳ್ಳೆ ವೆದರ್ ವಿದರ್ ಆಗಿದೆ. ಉತ್ತರ ತಮಿಳುನಾಡಿನಲ್ಲಿ ಜೋರು ಮಳೆ ಆಗುತ್ತಿದೆ. ನುಂಗಂ ಬಾಕಂ ನಲ್ಲಿರುವ ಹವಾಮಾನ ಇಲಾಖೆಯವರು ಮೂರು ದಿವಸಗಳ ಹಿಂದೆ ಹೇಳಿದ ಪ್ರಕಾರ ಇನ್ನೆರಡು ದಿವಸ ಹವೆ ಹೀಗೆ ಇರತ್ತೆ ಅಂತ ಇತ್ತು. ಆಮೇಲೆ ಎರಡು ದಿವಸಗಳು ತೀರಿದರೂ ಬಿಸಿಲು ಕಾಣಿಸುತ್ತಿಲ್ಲ. ಅಂತೂ ಕನ್ನಡ ಚಿತ್ರಗಳಿಗೆ ಬಿಸಿಲೆ ಬಿಸಿಲೆ ಹೊಂಬಿಸಿಲೆ ಎಂದು ಹಾಡು ಬರೆಯುವುದಕ್ಕೆ ಕವಿಗಳಿಗೆ ಸ್ಫೂರ್ತಿ ಸಿಕ್ಕಿದೆ.
ಆಗಾಗ ರಾಗಿಕಾಳಿನಷ್ಟು ಗಾತ್ರದ ಮಳೆ ಅಲ್ಲಲ್ಲಿ ಉದುರುವುದು ಬಿಟ್ಟರೆ ನಮ್ಮ ರಾಜ್ಯದಲ್ಲಿ ಹೇಳಿಕೊಳ್ಳುವಂಥ ಮಳೆ ಏನಿಲ್ಲ. ಆಕಾಶದ ತುಂಬ ಕರಿಮೋಡ. ಕೆಲವರಿಗೆ ಇಂಥ ಹವೆ ಇಷ್ಟವಾಗತ್ತೆ. ಹಲವರಿಗೆ ಕಷ್ಟವಾಗತ್ತೆ. ಇಬ್ಬರೂ ಸಹಿಸಿಕೊಳ್ಳುತ್ತಾರೆ.
ಶುಕ್ರವಾರ(ಡಿ.5) ಮಧ್ಯಾಹ್ನ ರಾಜ್ಯದಲ್ಲಿ ಅತಿ ಕನಿಷ್ಠ ಅಂದರೆ 12.5ಡಿಗ್ರಿ ಸೆಲ್ಸಿಯಸ್ ತಾಪಮಾನ ಮೈಸೂರಿನಲ್ಲಿ ದಾಖಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ಇಂದು ತುಂತುರು ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)
ಹಾಗೇ ಸುಮ್ಮನೇ ಚಳಿಚಳಿ ಹಾಡು