ಕುಮಾರಸ್ವಾಮಿಗೆ ನೆನಪಿಲ್ಲ, ರಾಜ್ಯಪಾಲರಿಗೆ ಮರೆವಿಲ್ಲ
ಬೆಂಗಳೂರು, ಡಿ.4 : ಜನತಾ ದರ್ಶನದ ಮುಖಾಂತರ ಗ್ರಾಮೀಣ ಜನರ ಜೊತೆ ಬೆರೆತ ಮೊದಲ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಅಧಿಕಾರ ಇರಲಿ, ಇಲ್ಲದೇ ಇರಲಿ ನನ್ನ ಜನತಾ ದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದುವರೆಯುತ್ತದೆ. ನನ್ನ ಕೈಲಾದ ಮಟ್ಟಿಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದಿದ್ದ ಕುಮಾರಸ್ವಾಮಿಗೆ, ತಮ್ಮ ಮಾತೀಗ ನೆನಪಲ್ಲಿಲ್ಲ. ಇದೀಗ ಜನತಾ ದರ್ಶನವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್, ತಾಲೂಕುಗಳಿಗೂ ವಿಸ್ತರಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಮುರಿದ ಪರಿಣಾಮ ಎರಡನೇ ಸಲ, ಕರ್ನಾಟಕ ರಾಜ್ಯಪಾಲರ ಆಡಳಿತವನ್ನು ಕಂಡಿದೆ. ಜನಪ್ರತಿನಿಧಿಗಳಿಲ್ಲದಿದ್ದರೂ, ಉತ್ತಮ ಆಡಳಿತ ನೀಡುವ ಉತ್ಸಾಹ ರಾಜ್ಯಪಾಲರಲ್ಲಿದೆ. ಅಧಿಕಾರಿಗಳನ್ನು ತಿವಿದು ಎಬ್ಬಿಸುತ್ತಿರುವ ರಾಜ್ಯಪಾಲರು, ಇನ್ಮುಂದೆ ಪ್ರತಿ ಶನಿವಾರ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ರಾಜ್ಯಪಾಲರು, ಆಡಳಿತ ಯಂತ್ರದ ಗಮನ ಸೆಳೆಯಲು ಜನತಾದರ್ಶನ ಸಾರ್ವಜನಿಕರಿಗೆ ವೇದಿಕೆಯಾಗಲಿದೆ. ಜನರ ಅರ್ಜಿಗಳನ್ನು ಕೊಳೆಯಲು ಬಿಡದೇ, ಸಂಬಂಧಪಟ್ಟ ಇಲಾಖೆಗಳು ಇತ್ಯರ್ಥಪಡಿಸುವಂತೆ ಸೂಚನೆ ನೀಡಿದ್ದೇವೆ. ಈ ಬಗ್ಗೆ ನಿಗಾವಹಿಸುತ್ತೇವೆ ಎಂದರು.
ಮೂವರು ಆಪ್ತ ಸಹಾಯಕರನ್ನು ನೇಮಕ ಮಾಡಿಕೊಂಡಿರುವ ರಾಜ್ಯಪಾಲರು, ತಮ್ಮ ಆಡಳಿತವನ್ನು ಈಗಾಗಲೇ ಚುರುಕುಗೊಳಿಸಿದ್ದಾರೆ. ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡಿಸಲು ಮನಸ್ಸು ಮಾಡಿದ್ದಾರೆ. ಅವರ ಕನಸು ನನಸಾಗಲಿ.
(ದಟ್ಸ್ ಕನ್ನಡ ವಾರ್ತೆ)