ಮಂಗಳೂರು ಬೆಂಗಳೂರು ರೈಲಿಗೆ ಲಾಲು ಚಾಲನೆ
ಮಂಗಳೂರು, ಡಿ.8 : ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಶನಿವಾರ(ಡಿ.8) ಬಹುನಿರೀಕ್ಷಿತ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲಿಗೆ ಚಾಲನೆ ನೀಡಿದರು.
ಈ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ರೈಲಿನಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ರಸ್ತೆ ಮುಖಾಂತರ ನಡೆಯುತ್ತಿದ್ದ ಶೇ.60ರಷ್ಟು ಸರಕು ಸಾಕಾಣೆಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಟಿಕೆಟ್ ದರ ರೂ. 850(ಮೊದಲ ದರ್ಜೆ ಎಸಿ), ರೂ.611(ಎರಡನೇ ದರ್ಜೆ ಎಸಿ), ರೂ.227(ಸುಖಾಸನ ಎರಡನೇ ದರ್ಜೆ ), ರೂ.119(ಸಾಮಾನ್ಯ ಎರಡನೇ ದರ್ಜೆ)ಆಗಿದ್ದು, ಮುಂದಿನ ಒಂದು ವಾರದ ಬುಕ್ಕಿಂಗ್ ಈಗಾಗಲೇ ಮುಗಿದಿದೆ.
6517 ಮತ್ತು 6518ಸಂಖ್ಯೆ ಟ್ರೇನುಗಳು ಯಶವಂತಪುರದಿಂದ ಮಂಗಳೂರಿಗೆ, ಮಂಗಳೂರಿನಿಂದ ಯಶವಂತಪುರಕ್ಕೆ ಸಂಚರಿಸಲಿವೆ. ಮಂಗಳೂರಿನಿಂದ ಹೊರಡುವ ರೈಲು ಕಬಕ, ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ ಮತ್ತು ಹಾಸನ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಬೆಂಗಳೂರು ಮತ್ತು ಮಂಗಳೂರು ರೈಲು ಸೇವೆಗಾಗಿ ಈ ಹಿಂದೆ ಅನೇಕ ಹೋರಾಟಗಳು ನಡೆದಿವೆ. ಮಂಗಳೂರಿಗರ ಕನಸು 11ವರ್ಷಗಳ ನಂತರ ಈಗ ನನಸಾಗುತ್ತಿದೆ. 679 ಸೇತುವೆಗಳು, 57ಸುರಂಗಗಳನ್ನು ಬಳಸಿಕೊಂಡು ಈ ರೈಲು ಹಸಿರು ಕಾನನದ ಮಧ್ಯೆ ಸಾಗುತ್ತದೆ. 1979ರಲ್ಲಿ ಆರಂಭವಾಗಿದ್ದ ರೈಲು ಸೇವೆ, ಗೇಜ್ ಪರಿವರ್ತನೆ ನೆಪದಲ್ಲಿ ಸ್ಥಗಿತಗೊಂಡಿತ್ತು.
(ದಟ್ಸ್ ಕನ್ನಡ ವಾರ್ತೆ)