ತೆಲಗಿಗೆ ಒಟ್ಟು ನಲವತ್ತೇರಡು ವರ್ಷ ಜೈಲು ಶಿಕ್ಷೆ!
ಮುಂಬಯಿ, ಡಿ.1 : ಉಪ್ಪು ತಿಂದವ ನೀರು ಕುಡಿಯಲೇ ಬೇಕು. ನಕಲಿ ಛಾಪಾ ಕಾಗದದ ಮುಖಾಂತರ ದೇಶವನ್ನು ತಲ್ಲಣಗೊಳಿಸಿದ್ದ ಅಬ್ದುಲ್ ಕರೀಂಲಾಲ ತೆಲಗಿಗೆ ಶಿಕ್ಷೆ ಮೇಲೆ ಶಿಕ್ಷೆ ನೀಡಲಾಗುತ್ತಿದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು, ತೆಲಗಿಗೆ 7ವರ್ಷಗಳ ಕಠಿಣ ಶಿಕ್ಷೆ ಹಾಗೂ 3ಲಕ್ಷ ರೂ. ದಂಡ ವಿಧಿಸಿದೆ.
ಇತರೆ ಪ್ರಕರಣ ಮತ್ತು ಈ ಪ್ರಕರಣದ ಶಿಕ್ಷೆಯನ್ನು ಲೆಕ್ಕ ಹಾಕಿದರೆ, ತೆಲಗಿ 42ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಆದರೆ ಏಡ್ಸ್ ರೋಗದಿಂದ ಬಳಲುತ್ತಿರು ತೆಲಗಿ, ಎಷ್ಟು ವರ್ಷ ಬದುಕುತ್ತಾನೆ ಎಂಬುದೇ ಮುಖ್ಯ ಪ್ರಶ್ನೆ.
ಚೆನ್ನೈನಲ್ಲಿ ತೆಲಗಿಯ ನಕಲಿ ಛಾಪಾ ಕಾಗದ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ಕ್ರಿಸ್ಟೋಫರ್ ಭಟ್ಟಿ ಎಂಬಾತನನ್ನು 2001ರಲ್ಲಿ ಹತ್ಯೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೆಲಗಿಗೆ ಇದೀಗ 7ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನಕಲಿ ಛಾಪಾ ಕಾಗದ ಪ್ರಕರಣದಲ್ಲಿ ತೆಲಗಿ ಅನುಭವಿಸುತ್ತಿರುವ ಶಿಕ್ಷೆಗೆ ಪೂರಕವಾಗಿ, ಸದರಿ ಶಿಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ಸ್ಥಳೀಯ ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದಾಗಿ ತೆಲಗಿ ಪ್ರತ್ಯೇಕ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಏಡ್ಸ್ ಪೀಡಿತನಾದ ತೆಲಗಿಗೆ ಇನ್ನಷ್ಟು ವರ್ಷ ಶಿಕ್ಷೆಯಾಗಿರುವುದನ್ನು ಆಕ್ಷೇಪಿಸಿ, ಉನ್ನತ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ತೆಲಗಿ ಪರ ವಕೀಲರು ಹೇಳಿದ್ದಾರೆ. ಉಪ್ಪು ತಿಂದವನಿಗೆ ಶಿಕ್ಷೆ ಸರಿ. ಆದರೆ ತೆಲಗಿಗೆ ಉಪ್ಪು ತಿನ್ನಿಸಿದವರಿಗೆ ಶಿಕ್ಷೆ ಬೇಡವೇ? ಎಂಬುದು ಜನಸಾಮಾನ್ಯರ ಪ್ರಶ್ನೆ.
(ದಟ್ಸ್ ಕನ್ನಡ ವಾರ್ತೆ)