ವಿಧಾನಸಭೆ ವಿಸರ್ಜನೆಗೆ ಅಸ್ತು; ಇಂದು ರಾಷ್ಟ್ರಪತಿ ಅಂಕಿತ
ನವದೆಹಲಿ, ನ.27 : ರಾಜ್ಯ ರಾಜಕೀಯ ಚಿತ್ರಣ ಕಡೆಗೂ ಊಹಿಸಿದಂತೆಯೇ ಆಗಿದೆ. ಕರ್ನಾಟಕ ವಿಧಾನಸಭೆ ವಿಸರ್ಜನೆಗೆ ಸೋಮವಾರ (ನ.26) ಸಂಸತ್ತಿನ ಅನುಮೋದನೆ ದೊರಕಿದೆ.
ವಿಧಾನಸಭೆ ಇಂದು ವಿಸರ್ಜನೆಯಾಗಲಿದೆ. ಈಗ ರಾಜ್ಯ ರಾಜಕೀಯ ಪಕ್ಷಗಳಿಗೆ ಉಳಿದಿರುವ ಮುಂದಿನ ದಾರಿ ಚುನಾವಣೆ ಮಾತ್ರ.
ಸೋಮವಾರ ಲೋಕಸಭೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆ 45 ತಿಂಗಳ ರಾಜ್ಯ ರಾಜಕೀಯದ ಎಲ್ಲಾ ಚಿತ್ರಣವನ್ನು ಬಿಡಿಸಿಟ್ಟಿತು. ದೇವೇಗೌಡರು ಎಸಗಿದ ದ್ರೋಹವನ್ನು ಅನಂತಕುಮಾರ್ ದಾಖಲಿಸಲು ಪ್ರಯತ್ನಿಸಿದರೆ, ಎಲ್ಲಾ ಅನಿಷ್ಟಗಳಿಗೂ ಬಿಜೆಪಿಯೇ ಕಾರಣ ಎಂದು ತಮ್ಮ ವಾದವನ್ನು ದೇವೇಗೌಡರು ಸಂಸತ್ತಿನ ಮುಂದೆ ಇಡಲು ಪ್ರಯತ್ನಿಸಿದರು. ಕಾಂಗ್ರೆಸ್ ಕಡೆಯಿಂದ ಆರ್.ಎಲ್. ಜಾಲಪ್ಪ ದೇವೇಗೌಡರ ವಿದುದ್ಧ ವಾಕ್ದಾಳಿ ಮಾಡಿದರು.
ಅಧಿಕಾರ ಲಾಲಸೆಯಿಂದ ದೇವೇಗೌಡರು ದ್ರೋಹ ಎಸಗಿದ್ದಾರೆ. ಕರ್ನಾಟಕದ ಹೆಸರು, ಘನತೆಯನ್ನು ಎರಡು ಎರಡೂವರೆ ತಿಂಗಳಿಂದ ನಡೆದ ರಾಜಕೀಯ ದ್ರೋಹದಿಂದ ಕುಸಿದಿದೆ ಎಂದು ಅನಂತಕುಮಾರ್ ಆರೋಪಿಸಿದರು. ನಾನು ಇವರಿಗೆಲ್ಲಾ ಹೆದರಲ್ಲ. ದೇವೇಗೌಡರನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಶ್ರೀರಾಮುಲುವನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದಾಗಲೇ ಸರಕಾರ ರಚನೆ ಕಸರತ್ತು ಅಂತ್ಯಗೊಂಡಿತ್ತು ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.
(ಏಜನ್ಸೀಸ್)