ದಳ ಕುಂಬಳಕಾಯಿ ಹೋಳು : ಪ್ರಕಾಶ್ಗೆ 30 ಶಾಸಕರ ಬೆಂಬಲ
ಬೆಂಗಳೂರು, ನ.27 : ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅನೇಕರು ರಾಜಕೀಯ ಭವಿಷ್ಯ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ. ಇತರ ಪಕ್ಷಗಳ ಸದಸ್ಯರನ್ನು ಸೇರಲು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಹುನ್ನಾರ ನಡೆಸಿವೆ.
ಏತನ್ಮಧ್ಯೆ, ಜಾತ್ಯತೀತ ಜನತಾದಳದ ರಾಷ್ಟ್ರೀಯ ನಾಯಕ ಎಚ್.ಡಿ.ದೇವೇಗೌಡ ಅವರ 'ಕೌಟುಂಬಿಕ ರಾಜಕೀಯ'ದಿಂದ ಬೇಸತ್ತಿರುವ ಪಕ್ಷದ 30 ಶಾಸಕರು ಬಂಡಾಯವೆದ್ದಿರುವ ಎಂ.ಪಿ.ಪ್ರಕಾಶ್ ಅವರು ಕರೆದಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೇವೇಗೌಡರ ಕಾರ್ಯವೈಖರಿಯಿಂದ ಭ್ರಮನಿರಸನ ಹೊಂದಿರುವ ಶಾಸಕರು ತಮ್ಮ ಮುಂದಿನ ನಡೆಯನ್ನು ಈ ಸಭೆಯಲ್ಲಿ ಚರ್ಚಿಸಲಿದ್ದಾರೆ.
ಈ ವಿಷಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಂಡಾಯ ಶಾಸಕ, ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು, ನವೆಂಬರ್ 29ರಂದು ಜೆಡಿಎಸ್ನ ಕಾರ್ಯಕಾರಣಿ ಸಭೆ ನಡೆಯುತ್ತಿರುವ ಮುನ್ನವೇ ತಾವು ಸಭೆ ನಡೆಸುವ ಅಗತ್ಯವಿತ್ತು ಎಂದರು. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಿರಂಕುಷ ಧೋರಣೆಯನ್ನು ಪ್ರಕಾಶ್ ತರಾಟೆಗೆ ತೆಗೆದುಕೊಂಡರು.
ಬುಧವಾರ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿರುವ ಶಾಸಕರು ಗುರುವಾರದ ಕಾರ್ಯಕಾರಣಿ ಸಭೆಯಿಂದ ಹೊರಗುಳಿಯಲಿದ್ದಾರೆ. ಬಿಜೆಪಿಗೆ ಅಧಿಕಾರ ಹಸ್ತಾಂತರ ಮತ್ತು ಬೆಂಬಲ ಹಿಂಪಡೆತಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಣಯ ತೆಗೆದುಕೊಂಡ ಅಪ್ಪ-ಮಗನ ವಿರುದ್ಧ ಸಮಾನಮನಸ್ಕ ಶಾಸಕರು ಬೇಸತ್ತಿದ್ದಾರೆ. ಇದರಿಂದಾಗಿ ಪಕ್ಷದ ವರ್ಚಸ್ಸಿಗೆ ಕಪ್ಪುಬಳಿದಂತಾಗಿದೆ ಎಂದು ಕೆಂಡಕಾರಿದರು.
ಪಕ್ಷದ ಮುಂದಿನ ನಡೆಯ ಬಗ್ಗೆ ಶಾಸಕರೆಲ್ಲರು ಚರ್ಚಿಸಲಿದ್ದಾರೆ ಎಂದು ಅವರು ತಿಳಿಸಿದರು.
(ಯುಎನ್ಐ)