ದೇವೇಗೌಡರ ಕೊನೆಯ ಭಾಷಣ ಏನು ಹೇಳುತ್ತದೆ?
ನವದೆಹಲಿ, ನ.27 : ಸಂಸತ್ತಿನಲ್ಲಿ ಇದೇ ನನ್ನ ಕೊನೆಯ ಭಾಷಣ ಎಂಬ ಸೂಚನೆಯೊಂದಿಗೆ ಮಾತಿಗಿಳಿದ ದೇವೇಗೌಡರು ತಮ್ಮ ಅಂತರಾಳದೊಳಗೆ ಏನಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಎಸ್.ಎಂ. ಕೃಷ್ಣ ಎಷ್ಟು ಬಾರಿ ಬೆಂಗಳೂರಿಗೆ ಬಂದಿದ್ದಾರೆ?
ಒಬ್ಬ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಅಳಿಯ ಚುನಾವಣೆ ಬಳಿಕ ನಮ್ಮ ಮನೆಗೆ ಬಂದು ಬೆಂಬಲ ಕೋರಿದರು. ನೀವು ಕಾಂಗ್ರೆಸ್ ಪಕ್ಷವನ್ನು 153ರಿಂದ 64ಕ್ಕೆ ಇಳಿಸಿದ್ದೀರಿ, ಬೆಂಬಲ ಸಾಧ್ಯವಿಲ್ಲ ಎಂದು ಅವರಿಗೆ (ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ) ಹೇಳಿದ್ದೆ. ಕೃಷ್ಣ ಅವರ ಸಮಯದಲ್ಲಿ ಜೆಡಿಎಸ್ ಇಬ್ಭಾಗ ಆಗಿದ್ದನ್ನೂ ಅವರು ಸ್ಮರಿಸಿಕೊಂಡರು. ಮಹಾರಾಷ್ಟ್ರ ರಾಜ್ಯಪಾಲರು ಎಷ್ಟು ಸಲ ಬೆಂಗಳೂರಿಗೆ ಬಂದು ಹೋಗಿದ್ದಾರೆ ಎನ್ನುವ ವರದಿ ತಮ್ಮ ಬಳಿ ಇರಬೇಕಲ್ಲವೆ? ಎಂದು ಗೃಹ ಸಚಿವರನ್ನು ಕೆಣಕಿದರು.
ಆರ್.ಎಲ್. ಜಾಲಪ್ಪ ಪ್ರಶ್ನೆಗೆ
20 ತಿಂಗಳ ಆಡಳಿತದ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದ ಆರ್.ಎಲ್. ಜಾಲಪ್ಪ ಅವರ ಪ್ರಶ್ನೆಗೆ ಬರೀ ಇಪ್ಪತ್ತು ತಿಂಗಳೇಕೆ? ಹಿಂದಿನ ಐದು ವರ್ಷಗಳ ಆಡಳಿತದ ಬಗ್ಗೆಯೂ ತನಿಖೆಯಾಗಲಿ. ಅದನ್ನು ಸ್ವಾಗತಿಸುತ್ತೇನೆ ಎಂದು ಗೌಡರು ಉತ್ತರಿಸಿದರು. ಇದೇ ಸಂದರ್ಭದಲ್ಲಿ 1999ರ ಚುನಾವಣೆಯಲ್ಲಿ ವಾಜಪೇಯಿ ಹಾಸನಕ್ಕೆ ಬಂದು 'ದೇವೇಗೌಡರನ್ನು ಸೋಲಿಸಿ" ಎಂದು ಹೇಳಿದ್ದನ್ನು ನೆನೆಸಿಕೊಂಡರು.
ಕಾಂಗ್ರೆಸ್ ಮೈತ್ರಿ ಕುರಿತು
ಕಾಂಗ್ರೆಸ್ ಜತೆ ಸರಕಾರ ರಚಿಸಲು ನಾನು ಮುಂದಾಗಲಿಲ್ಲ. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ನನ್ನನ್ನು ಸಂಪರ್ಕಿಸಿ ಸರಕಾರ ರಚನೆಗೆ ಸೋನಿಯಾಗಾಂಧಿ ಅವರ ಒಪ್ಪಿಗೆ ಇದೆ ಎಂದರು. ನನ್ನನ್ನು ದ್ರೋಹಿ ಆನ್ನುತ್ತಿದ್ದಾರಲ್ಲ. ನಾನು ದ್ರೋಹಿ ಅಲ್ಲವೋ, ಹೌದೋ ಎನ್ನುವುದನ್ನು ಜನ ಹೇಳ್ತಾರೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಮೈತ್ರಿ ಬಗ್ಗೆ
ಬಿಜೆಪಿಯೊಂದಿಗೆ ಮೈತ್ರಿ ಸರಕಾರ ರಚನೆಯಾದಾಗ ಬಿಜೆಪಿಯ ಯಾವ ನಾಯಕರೂ ನನ್ನ ಜತೆ ಮಾತನಾಡಲಿಲ್ಲ. ಅವರ ಒಪ್ಪಂದ ಇದ್ದದ್ದು ಕುಮಾರಸ್ವಾಮಿ ಜತೆ; ದೇವೇಗೌಡರ ಜತೆ ಅಲ್ಲ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಮ್ಮ ಕುಂಟುಂಬದ ಸದಸ್ಯರ್ಯಾರು ಹೋಗಿರಲಿಲ್ಲ. ನನಗೆ ಅಧಿಕಾರ ದಾಹ ಎನ್ನುತ್ತಿದ್ದಾರೆ ಆದರೆ ನಾನು ಮೂರು ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೀನಿ. ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡಿತು. ಆಗ ಬಿಜೆಪಿ ನಾಯಕರು ಬೆಂಬಲ ಕೊಡಲು ಮುಂದೆ ಬಂದರು ಅದನ್ನು ನಿರಾಕರಿಸಿದೆ ಎಂದು ಹೇಳಿದರು.
ಬಿಜೆಪಿ ಕುರಿತು
ಮಂಗಳೂರಿನ ಕೋಮು ಗಲಭೆಯಲ್ಲಿ ಇಬ್ಬರು ಸತ್ತರು. ವಿರಾಟ್ ಹಿಂದೂ ಸಮಾವೇಶ ಮಾಡಿದರು. ಕರುಣಾನಿಧಿ ಅವರಂತಹ ಹಿರಿಯ ರಾಜಕಾರಣಿ ಮಗಳ ಮನೆಯ ಮೇಲೆ ದಾಳಿ ನಡೆಸಲಾಯಿತು. ಇದರಲ್ಲಿ ಆರೆಸ್ಸೆಸ್, ಭಜರಂಗ ದಳದ ಕಾರ್ಯಕರ್ತರಿದ್ದರು ಎಂದು ಬಿಜೆಪಿ ಮೇಲೆ ದಾಳಿ ಮಾಡಿದರು.
ರಾಮಕೃಷ್ಣ ಹೆಗಡೆಗೆ ದ್ರೋಹ ಮಾಡಿದ್ದು?
ರಾಮಕೃಷ್ಣ ಹೆಗಡೆಗೆ ದ್ರೋಹ ಮಾಡಿದ್ದ ಆರೋಪವನ್ನು ಗೌಡರು ತಳ್ಳಿಹಾಕಿದರು. ಅವರಿಗೆ ದ್ರೋಹ ಮಾಡಿದ್ದು ನಾನಲ್ಲ. ಅವರ್ಯಾರು ಅನ್ನುವುದು ಎಲ್ಲರಿಗೂ ಗೊತ್ತು ಎಂದ ಅವರು ಬಿಜೆಪಿ ಕಡೆಗೆ ಬೆರಳು ತೋರಿಸಿದರು.
(ಏಜನ್ಸೀಸ್)