ಜೆಡಿಎಸ್ನೊಂದಿಗೆ ಮರುಮೈತ್ರಿ ಸಾಧ್ಯವೇ ಇಲ್ಲ : ಕಾಂಗ್ರೆಸ್
ನವದೆಹಲಿ, ನ.23 : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಭಂಗವಾದನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮರುಮೈತ್ರಿ ಕುರಿತಂತೆ ಎದ್ದಿದ್ದ ಊಹಾಪೋಹಗಳಿಗೆ ಕಾಂಗ್ರೆಸ್ ಫುಲ್ಸ್ಟಾಪ್ ಹಾಕಿದೆ.
ಮರುಮೈತ್ರಿಯ ಸಾಧ್ಯತೆ ಇಲ್ಲದಿದ್ದರೂ ಜೆಡಿಎಸ್ನ ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್ ಮತ್ತು ತೆರೆಮರೆಯಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ನಡೆಸುತ್ತಿದ್ದ ಮಾತುಕತೆಯಿಂದ ಈ ಕುರಿತು ಊಹಾಪೋಹಗಳು ಹಾರಾಡುತ್ತಿದ್ದವು. ಆದರೆ, ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಯಾರೊಂದಿಗೂ ಸರ್ಕಾರ ರಚಿಸುವುದಿಲ್ಲ ಎಂದು ಘೋಷಿಸಿ ಇದಕ್ಕೆ ತೆರೆ ಎಳೆದಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುಪಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚವ್ಹಾಣ್ ಕೂಡ, ವಿಧಾನಸಭೆ ವಿಸರ್ಜನೆ ಶತಸಿದ್ಧ. ರಾಜ್ಯದಲ್ಲಿ ಕೆಲ ನಾಯಕರು ಹೇಳುತ್ತಿರುವ ಹೇಳಿಕೆಗಳೆಲ್ಲ ಕೇವಲ ವದಂತಿ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಆಳ್ವಿಕೆಯ ಘೋಷಣೆ ಸಂಸತ್ನ ಉಭಯ ನದನಗಳ ಮುಂದಿದ್ದು ವಾರದೊಳಗೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ರಾಷ್ಟ್ರಪತಿ ಆಳ್ವಿಕೆಗೆ ಅನುಮೋದನೆ ದೊರೆಯುತ್ತಿದ್ದಂತೆ ವಿಧಾನಸಭೆ ವಿಸರ್ಜನೆಯಾಗಲಿದೆ.
ನನ್ನೊಂದಿಗೂ 30 ಶಾಸಕರಿದ್ದಾರೆ. ಹಾಗೆಂದು ಸರ್ಕಾರ ರಚಿಸಲು ಸಾಧ್ಯವೇ? ರಾಷ್ಟ್ರಪತಿ ಆಳ್ವಿಕೆ ಘೋಷಣೆ ಸಂಸತ್ ಮುಂದಿದೆ. ಈ ಸಮಯದಲ್ಲಿ ಯಾರು ಏನೇ ಹೇಳಿದರೂ ಅದು ಕೇವಲ ವದಂತಿ ಮಾತ್ರ. ಅಯ್ಯೆ ಹೋಗ್ರಿ, ಮತ್ತೆ ಸರ್ಕಾರ ರಚನೆಯಾಗುವುದು ಎಲ್ಲಾ ಬಂಡಲ್. ಚುನಾವಣೆಗೆ ಸಿದ್ಧವಾಗುವುದೊಂದೇ ದಾರಿ ಎಂದು ಕಾಂಗ್ರೆಸ್ನ ಜನಪ್ರಿಯ ಮುಖಂಡರೊಡ್ಡರು ದಟ್ಸ್ಕನ್ನಡಕ್ಕೆ ತಿಳಿಸಿದ್ದಾರೆ.
ಮಾತನಾಡದೇ ಎದ್ದು ಹೋದ ಮುನ್ಷಿ : ಕಳೆದ ವಾರ ಕಾಂಗ್ರೆಸ್ ನಾಯಕ ಪ್ರಿಯರಂಜನ್ ದಾಸ್ ಮುನ್ಷಿ ಅವರನ್ನು ಭೇಟಿಯಾಗಲು ದೇವೇಗೌಡರು ಪ್ರಯತ್ನಿಸಿದ್ದರಾದರೂ ಮುನ್ಷಿ ಕ್ಯಾರೆ ಎನ್ನದೆ ಎದ್ದು ಹೋಗಿದ್ದರು. ಅವರ ಭೇಟಿ ನಾನಾ ವದಂತಿಗಳಿಗೆ ಕಾರಣವಾಗಿತ್ತು. ಅದರೊಂದಿಗೆ, ಪ್ರಕಾಶ್ ಕೂಡ ಕಾಂಗ್ರೆಸ್ ಮನಸ್ಸು ಮಾಡಿದರೆ ಸರ್ಕಾರ ರಚನೆ ಸಾಧ್ಯ ಎನ್ನುತ್ತಲೇ ಓಡಾಡುತ್ತಿದ್ದರು.
(ಏಜೆನ್ಸಿ)