ನನ್ನ ಮುಗಿಸಲು ದೇವೇಗೌಡರಿಂದ ಮಾಟಮಂತ್ರ : ಯಡ್ಡಿ
ಬೆಂಗಳೂರು, ನ.20: ದೇವೇಗೌಡರು ಆಗಾಗ ಪೂಜೆ ಹೋಮಗಳನ್ನು ನಡೆಸುತ್ತಾರೆ. ಅವು ದೈವ ಶಾಂತಿಗಾಗಿ ನಡೆಸುವ ಪೂಜೆಗಳಲ್ಲ. ಅವು ಮಾಟ ಮಂತ್ರಗಳು. ಈ ಸಲ ನನ್ನನ್ನು ಮುಗಿಸಲು ಅವರು ಮಾಟಮಂತ್ರದ ಮೊರೆ ಹೋಗಿದ್ದಾರೆ. ಗೌಡರು ಮತ್ತು ಅವರ ಮಕ್ಕಳಿಂದ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಒಂದು ವೇಳೆ ನಾನು ಮರಣ ಹೊಂದಿದರೆ ಅದಕ್ಕೆ ಗೌಡರ ಕುಟುಂಬವೇ ಕಾರಣ ಎಂದು ಉಯಿಲು ಬರೆದಿಡುತ್ತೇನೆ. ಅದರ ಒಂದು ಪ್ರತಿಯನ್ನು ಗೃಹ ಇಲಾಖೆಗೂ ರವಾನಿಸುತ್ತೇನೆ ಎಂದರು.
ದೇವೇಗೌಡರ ಕುಟುಂಬ ಮಾಡಿರುವ ಮಾಟ ಮಂತ್ರಗಳ ವಿವರಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ. ಈ ಮಾಟಮಂತ್ರಗಳಿಗೆ ನಾನು ಹೆದರುವವನಲ್ಲ. ಇವರ ಮಾಟಗಳಿಂದ ಸರ್ಕಾರ ರಚನೆಗೆ ಅಡ್ಡಿಯಾಗಲಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ನಾನು ಬದುಕಿರುವ ತನಕ ದೇವೇಗೌಡರ ಹತ್ತಿರಕ್ಕೆ ಸುಳಿಯುವುದಿಲ್ಲ.. ಅವರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ಕನ್ನಡ ವಾರ್ತೆ)