ವಿಶ್ವಾಸ ಮತ : ಹಿಂದಿನ ನಾಲ್ಕು ಸಲ ಹೀಗೆ ಆಗಿರಲಿಲ್ಲ!
ಬೆಂಗಳೂರು, ನ.20 : ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಲ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಸರ್ಕಾರವೊಂದು ವಿಫಲವಾಗಿದೆ. ಈ ಹಿಂದೆ ನಾಲ್ವರು ಮುಖ್ಯಮಂತ್ರಿಗಳು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಸಫಲರಾಗಿದ್ದಾರೆ. ಆದರೆ ವಿಶ್ವಾಸ ಮತ ತಮಗಿಲ್ಲ ಎನ್ನುವುದನ್ನು ಅರಿತ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿಂದೆ ವಿಶ್ವಾಸಮತ ಯಾಚಿಸಿದ್ದು ಯಾರು? ಯಾವಾಗ?
ರಾಮಕೃಷ್ಣ ಹೆಗಡೆ ಜ.17, 1984ರಲ್ಲಿ ವಿಶ್ವಾಸಮತ ಯಾಚಿಸಿದ್ದರು. ಆಗ ಜನತಾಪಕ್ಷ ಬಿಜೆಪಿ ಬೆಂಬಲ ಪಡೆದಿತ್ತು. ಭಿನ್ನಮತದಿಂದ ಸರಕಾರ ಪತನವಾಗುತ್ತದೆ ಎಂಬ ವದಂತಿ ಹಬ್ಬಿದಾಗ ಹೆಗಡೆ ವಿಶ್ವಾಸಮತ ಯಾಚಿಸಿದ್ದರು. ಸರಕಾರದ ಪರ 128, ವಿರೋಧವಾಗಿ ಸೊನ್ನೆ ಮತಗಳು ಬಿದ್ದಿದ್ದವು. ಅಂದು ಬೆಳಗ್ಗೆ 11ಕ್ಕೆ ಆರಂಭವಾದ ಚರ್ಚೆ ಮುಕ್ತಾಯವಾಗಿದ್ದು ಸಂಜೆ 6 ಗಂಟೆಗೆ.
ಅ.25, 1990ರಲ್ಲಿ ಎಸ್.ಬಂಗಾರಪ್ಪ ಅಧಿಕಾರ ವಹಿಸಿಕೊಂಡಾಗ ಸದನದಲ್ಲಿ ವಿಶ್ವಾಸಮತ ಕೋರಿದ್ದರು. ಆಗ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ಬಂಗಾರಪ್ಪ ನೇತೃತ್ವದ ಸರಕಾರ ಉಳಿದಿತ್ತು. ವಿರೇಂದ್ರ ಪಾಟೀಲರನ್ನು ಹೈಕಮಾಂಡ್ ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಬಂಗಾರಪ್ಪನವರನ್ನು ನೇಮಿಸಿದ್ದೇ ಈ ಬೆಳವಣಿಗೆಗಳಿಗೆ ಕಾರಣವಾತ್ತು.
ಜ.27, 1998ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ಪಟ್ಟ ಅವರನ್ನು ಅರಸಿ ಬಂದದ್ದರಿಂದ ಜೆ.ಹೆಚ್.ಪಟೇಲರು ಅಧಿಕಾರಕ್ಕೆ ಬಂದರು. ಜನತಾದಳದಲ್ಲಿ ಭಿನ್ನಮತ ಭುಗಿಲೆದ್ದು ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಸರಕಾರ ಪತನವಾಗುತ್ತದೆ ಎಂಬ ಆತಂಕದಲ್ಲಿ ಪಟೇಲರು ಬಲಾಬಲ ಪ್ರದರ್ಶನಕ್ಕೆ ಮುಂದಾದರು. ಆಗ ಸರಕಾರದ ಪರ ಬಿದ್ದ ಮತಗಳ ಸಂಖ್ಯೆ 135.
ಧರ್ಮಸಿಂಗ್ಗೆ ಕೈಕೊಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದಾಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರ ಸೂಚನೆ ಮೇರೆಗೆ ಫೆ.9, 2006ರಲ್ಲಿ ಬಹುಮತ ಸಾಬೀತುಪಡಿಸಿದರು. ಸರಕಾರದ ಪರ 138 ಹಾಗೂ ವಿರುದ್ಧವಾಗಿ 66 ಮತಗಳು ಚಲಾವಣೆಯಾಗಿದ್ದವು. ಬೆ.1ರಿಂದ ರಾ. 11ರ ತನಕ ಸಭೆ ಮುಂದುವರಿದಿತ್ತು.
(ದಟ್ಸ್ಕನ್ನಡ ವಾರ್ತೆ)