ಮಕ್ಕಳ ವಿಚಿತ್ರ ಹೆಸರುಗಳ ವಿರುದ್ಧ ಚತ್ತೀಸ್ಗಡದಲ್ಲಿ ಅಭಿಯಾನ
ಚತ್ತೀಸ್ಗಡ, ಅ.01 : ಹುಟ್ಟುವ ಮಕ್ಕಳಿಗೆ ಗೊಬ್ಬರ, ಸೆಗಣಿ, ಕಲ್ಲು, ಮಣ್ಣು, ನಟ್ಟು, ಬೋಲ್ಟು, ಜಾತ್ರೆ ಅಂತ ಹೆಸರು ಇಟ್ಟರೆ ಹೇಗಿರತ್ತೆ?
ಈ ಹೆಸರುಗಳು ಅನಾಗರಿಕತೆಯ ಸಂಕೇತವೇ ಅಥವ ಮೌಢ್ಯದ ಸಂಕೇತವೆ? ಇನ್ನು ಮುಂದಾದರೂ ಮಕ್ಕಳಿಗೆ ಅರ್ಥವತ್ತಾದ ಕರೆಯಲನುಗುಣವಾದ ಹೆಸರನ್ನಿಡಬೇಕೆಂದು ಚತ್ತೀಸ್ಗಡ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಕೇಂದ್ರಗಳಿಗೆ ಆದೇಶ ನೀಡಿದೆ.
ನಿರಕ್ಷರಕುಕ್ಷಿಗಳಿಂದ ತುಂಬಿರುವ ಹಳ್ಳಿಗಳಲ್ಲಿ ಹೆಚ್ಚಾಗಿ ದಲಿತ ಕುಟುಂಬಗಳಲ್ಲಿ ತಮ್ಮ ಮಕ್ಕಳಿಗೆ ಈ ಬಗೆಯ ಹೆಸರಿಡುವ ಪರಿಪಾಠವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಈ ಬಗೆಯ ವಿಚಿತ್ರ ಹೆಸರಿಡುವುದರಿಂದ ಕೆಟ್ಟ ಶಕ್ತಿಗಳಿಂದ ತಮ್ಮ ಮಕ್ಕಳನ್ನು ರಕ್ಷಣೆ ಸಿಗುತ್ತದೆಂಬುದು ಪಾಲಕರ ನಂಬಿಕೆ.
ಶಾಲೆಗಳ ರಿಜಿಸ್ಟರುಗಳಲ್ಲಿ ಈ ವಿಚಿತ್ರ ಹೆಸರುಗಳನ್ನು ಇನ್ನು ಮುಂದೆ ನಮೂದಿಸಬಾರದು. ಪಾಲಕರಿಗೆ ಇಂಥ ಹೆಸರುಗಳಿಂದಾಗುವ ಮುಜುಗರವನ್ನು ಮನವರಿಕೆಮಾಡಿಕೊಡಬೇಕೆಂದು ಇಲಾಖೆಯ ಸಹಾಯಕ ಶಿಕ್ಷಣಾಧಿಕಾರಿ ಎಸ್.ಎಲ್.ದಿಕ್ಷಿತ್ ಸೂಚನೆ ನೀಡಿದ್ದಾರೆ.
ಸ್ಕ್ರೂ, ನಟ್ಟು, ಬೋಲ್ಟು ಎಂಬ ಹೆಸರಿಡುವ ಪರಿಪಾಠ ಬೆಂಗಳೂರಿಗೆ ಹತ್ತಿರದ ರಾಮನಗರ ಬಳಿಯಿರುವ ಹಕ್ಕಿಪಿಕ್ಕಿ ಜನಾಂಗದಲ್ಲಿಯೂ ಇದೆ. ನಮ್ಮ ಶಿಕ್ಷಣ ಇಲಾಖೆ ಇದನ್ನು ಗಮನಿಸಿದೆಯೇ?
(ಯುಎನ್ಐ)