ನಾಡುನುಡಿಗಾಗಿ ಇದು ನನ್ನ ಅಂತಿಮ ಹೋರಾಟ : ದೇಜಗೌ
ಮೈಸೂರು, ಸೆ.30 : ಬಸವೇಶ್ವರ, ಗಾಂಧೀಜಿ ಹಾಗೂ ಕುವೆಂಪು ಅವರ ಹೆಸರಿನಲ್ಲಿ ಕ್ರಮವಾಗಿ ಅಕ್ಟೋಬರ್ 2, ನವೆಂಬರ್ 1ಮತ್ತು 30ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನಾಡೋಜ ಪ್ರಶಸ್ತಿ ಪುರಸ್ಕೃತ ಸಾಹಿತಿ ದೇ.ಜವರೇಗೌಡ ಹೇಳಿದ್ದಾರೆ.
ಅಲ್ಲದೇ, ಕನ್ನಡಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಜನವರಿ 1ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಅವರು ನಿರ್ಧರಿಸಿದ್ದಾರೆ. ಭಾಷೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಶಂಕಾಸ್ಪದವಾಗಿ ವರ್ತಿಸುತ್ತಿದೆ. ಶಾಸ್ತ್ರೀಯ ಸ್ಥಾನಮಾನ ನೀಡುವ ವಿಷಯದಲ್ಲಿ ಪಕ್ಷಪಾತ ತೋರುತ್ತಿದೆ. ಈ ದೇಶದಲ್ಲಿ ಪ್ರಾಣಾರ್ಪಣೆಯಿಲ್ಲದೇ, ಯಾವುದೇ ಕಾರ್ಯಸಾಧನೆಯಾಗುವುದಿಲ್ಲವೆಂದು ತೋರುತ್ತಿದೆ ಎಂದು ದೇಜಗೌ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ನನ್ನ ಹೋರಾಟ ನಿರಂತರ. ನನ್ನ ಕೊನೆ ಉಸಿರಿರುವ ತನಕ ಹೋರಾಟ ಮುಂದುವರೆಸುತ್ತೇನೆ. ನನ್ನ ಈ ಪ್ರತಿಜ್ಞೆ ಗುರು ದೀಕ್ಷೆಗನುಗುಣವಾಗಿದೆ. ಕನ್ನಡವನ್ನು ಕಡೆಗಾಣಿಸುವುದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಇದು ನನ್ನ ಅಂತಿಮ ಹೋರಾಟ ಎಂದು ದೇಜಗೌ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)