ಹೊಸ ನಾಟಕ : ಊದುಮಾರಿ ಗೌಡ್ರ ಜತೆ ಸಿನ್ಹಾ ಸಂಧಾನ
ಬೆಂಗಳೂರು, ಸೆ.30 : ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜೆಡಿಎಸ್ ಮುಖಂಡ ಹೆಚ್.ಡಿ.ದೇವೇಗೌಡರ ಜೊತೆ, ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಭಾನುವಾರ(ಸೆ.30) ರಾತ್ರಿ ಮಾತುಕತೆ ನಡೆಸಲಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಡಿ.ವಿ.ಸದಾನಂದ ಸುದ್ದಿಗಾರರಿಗೆ ಸುಳಿವು ನೀಡಿದ್ದಾರೆ. ಮಾತುಕತೆ ವೇಳೆ ದೋಸ್ತಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಶಮನಗೊಳ್ಳಲಿವೆ ಎಂದು ಅವರು ಅಭಿಪ್ರಾಯಪಟ್ಟರು. ದೇವೇಗೌಡರ ಜೊತೆ ತಾವು ಮಾತನಾಡಿದ್ದು, ಅವರು ಸಿನ್ಹಾ ಭೇಟಿಗೆ ಸಮ್ಮತಿಸಿದ್ದಾರೆ ಎಂದರು.
ಈ ಭೇಟಿಯನ್ನು ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಸಲ್ಲಿಸಿರುವ ರಾಜೀನಾಮೆ ಪತ್ರ, ಶನಿವಾರ ರಾತ್ರಿ ಮುಖ್ಯಮಂತ್ರಿಗಳ ತಲುಪಿದೆ. ಹೀಗಾಗಿ ಅಧಿಕಾರ ಹಸ್ತಾಂತರಕ್ಕಿದ್ದ ಎಲ್ಲ ತಡೆಗಳು ಇಲ್ಲವಾಗಿವೆ. ಉಭಯ ಪಕ್ಷಗಳ ನಡುವಿನ ಪರಿಸ್ಥಿತಿ ತಿಳಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸಚಿವರ ಸಭೆ ಸೋಮವಾರ(ಅ.1) ಬೆಳಗ್ಗೆ ನಡೆಯಲಿದೆ. ರಾತ್ರಿ ಸಚಿವ ಸಂಪುಟದ ಸಭೆ ನಡೆಯಲಿದೆ. ಅವಶ್ಯಬಿದ್ದರೆ ದೇವೇಗೌಡ ಅಥವಾ ಕುಮಾರಸ್ವಾಮಿಯನ್ನು ಭೇಟಿ ಮಾಡುತ್ತೇನೆ. ನಮಗೆ ಅಧಿಕಾರ ಹಸ್ತಾಂತರಕ್ಕಿಂತಲೂ ರಾಜ್ಯದ ಜನರ ಹಿತವೇ ಮುಖ್ಯ ಎಂದು ಯಡಿಯೂರಪ್ಪ ಹೇಳಿದರು.
ಬಲಿಪಶುವಾದ ಶ್ರೀರಾಮುಲು : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮಗೆ ಪ್ರಾಣ ಬೆದರಿಕೆವೊಡ್ಡಿದ್ದಾರೆ ಎಂದು ಸೆ.25ರಂದು ಶ್ರೀರಾಮುಲು, ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆಯನ್ನು ಮುಂದಿಟ್ಟುಕೊಂಡು ದೇವೇಗೌಡರು, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಗೊಂದಲದ ಗೂಡು ಮಾಡಿದ್ದರು. ಈಗ ಸಂಪುಟದಿಂದಲೇ ಶ್ರೀರಾಮುಲು ದೂರ ಉಳಿದಿದ್ದಾರೆ. ಗೌಡರ ಮುಂದಿನ ನಡೆ ಏನು ಎಂಬುದು ಭಾನುವಾರ ರಾತ್ರಿ ಗೊತ್ತಾಗಲಿದೆ.
(ದಟ್ಸ್ ಕನ್ನಡ ವಾರ್ತೆ)