ನಾಡಗೀತೆ ವಿವಾದಕ್ಕೆ ರಾಜ್ಯ ಸರ್ಕಾರ ತೆರೆ!
ಬೆಂಗಳೂರು, ಆಗಸ್ಟ್ 03 : ನಾಡಗೀತೆ ಬಗೆಗಿನ ಗೊಂದಲಗಳಿಗೆ ಸದ್ಯದಲ್ಲೇ ತೆರೆ ಎಳೆಯುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ನಾಡಗೀತೆ 'ಜಯಭಾರತ ಜನನಿಯ ತನುಜಾತೆ'ಎಷ್ಟು ಉದ್ದ ಇರಬೇಕು. ಯಾವ ಸಂಗೀತದಲ್ಲಿ ಹಾಡಬೇಕು. ಎಷ್ಟು ಸಮಯದಲ್ಲಿ ಹಾಡಬೇಕು ಮತ್ತಿತರ ವಿಷಯಗಳ ಬಗ್ಗೆ ಮುಂದಿನ ಒಂದು ತಿಂಗಳೊಳಗಾಗಿ ಸರ್ಕಾರ ತೀರ್ಮಾನ ಪ್ರಕಟಿಸಲಿದೆ ಎಂದರು.
ನಾಡಗೀತೆಗೆ ಸಂಬಂಧಿಸಿದ ಸೂಕ್ಷ್ಮಗಳು ಮತ್ತು ವಿವಾದಗಳ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟ ನಿರ್ಣಯ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಒಂದು ಸಮಿತಿಯನ್ನೂ ಸಹಾ ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ಏನದು ವಿವಾದ?
ನಾಡಗೀತೆಗೆ ಕೆಲವು ಪದ ಸೇರಿಸಲು, ತೆಗೆಯಲು ವಾದಗಳು ಕೇಳಿ ಬಂದಿದ್ದವು. ಈ ಹಿಂದೆ ಮೈಸೂರು ಅನಂತಸ್ವಾಮಿ ನಾಡಗೀತೆಗೆ ಸಂಗೀತ ಸಂಯೋಜಿಸಿದ್ದರು. ಇತ್ತೀಚೆಗೆ ಸಿ.ಅಶ್ವಥ್, ನಾಡಗೀತೆಗೆ ಹೊಸದಾಗಿ ಸಂಗೀತ ಸಂಯೋಜಿಸಿಸಿದ್ದಾರೆ. ಯಾರ ಸಂಗೀತಸಂಯೋಜನೆಯನ್ನು ಬಳಸಿಕೊಳ್ಳಬೇಕು ಎಂಬ ವಿಚಾರ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ.
(ದಟ್ಸ್
ಕನ್ನಡ
ವಾರ್ತೆ)