ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರ ದುರ್ಮರಣ
ಮೈಸೂರು : ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರು ವಿದ್ಯುತ್ ತಂತಿ ತಗುಲಿ ಸಾವಿಗೀಡಾದ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಮುನಿಯಪ್ಪ ಗೌಡರ್ ದೊಡ್ಡಿಯಲ್ಲಿ ಜರುಗಿದೆ.
ಮೃತರನ್ನು ರಜನಿ ಮೇರಿ(55), ಆಕೆಯ ಮಗಳು ಸಗಾಯಾ ಮೇರಿ(28) ಮತ್ತು ಅಳಿಯ ಮೊದಲ್ ಮುತ್ತು(30) ಎಂದು ಗುರುತಿಸಲಾಗಿದೆ.
ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದ ಅವರು ಬಟ್ಟೆ ಒಣಹಾಕಲೆಂದು ಹತ್ತಿರದ ಟ್ರಾನ್ಸ್ಫಾರ್ಮರ್ಗೆ ತಂತಿಯನ್ನು ಕಟ್ಟಿದ್ದರು. ಮಳೆಯಿಂದಾಗಿ ತೊಯ್ದ ಬಟ್ಟೆಗಳನ್ನು ತರಲು ಸಗಾಯಾ ಹೋದಾಗ ವಿದ್ಯುತ್ ಹರಿಯುತ್ತಿದ್ದ ತಂತಿ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಆಕೆಯ ಸಹಾಯಕ್ಕೆ ಹೋದ ತಾಯಿಗೆ ಕೂಡ ವಿದ್ಯುತ್ ತಂತಿ ತಗುಲಿದೆ. ಸ್ವಲ್ಪ ಸಮಯದ ನಂತರ ಗೌಡಳ್ಳಿಯಲ್ಲಿ ಪ್ರಾರ್ಥನೆಗೆಂದು ಹೋಗಿದ್ದ ಅಳಿಯ ಮುತ್ತು ಕೂಡ ಅದೇ ರೀತಿ ಮುತ್ಯುಗೀಡಾಗಿದ್ದಾನೆ.
ಹಾಲು ಮಾರುವವನು ಇಂದು ಬೆಳಿಗ್ಗೆ ಅವರ ಮನೆಗೆ ಹೋದಾಗ ಈ ದುರ್ಘಟನೆ ಜರುಗಿರುವುದು ಗಮನಕ್ಕೆ ಬಂದಿತೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಸುದ್ದಿ ಮುಟ್ಟಿಸಿದರೂ ಕೆಇಬಿ ಇಲಾಖೆಯವರು ಕೂಡಲೆ ಸ್ಥಳಕ್ಕೆ ಧಾವಿಸದಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ರೊಚ್ಚಿಗೆದ್ದ ಹಳ್ಳಿಗರು ಇಲಾಖೆಯ ವಿರುದ್ಧ ಘೋಷಣೆ ಕೂಗುತ್ತ ರಸ್ತೆ ತಡೆ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications