ಬೆಂಗಳೂರಿನ ವಿ.ನೋಂ.ಕಚೇರಿಗೆ ಕೊಡೆಯಾಂದಿಗೆ ಬನ್ನಿ!
ಬೆಂಗಳೂರು : ನಗರದ ಪೊಲೀಸ್ ಕಚೇರಿಗಳು ಹೊಸ ವಿನ್ಯಾಸ ಹಾಗೂ ಹೊಸತನವನ್ನು ಕಂಡರೂ, ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ವಿದೇಶಿಯರ ನೋಂದಣಿ ಕಚೇರಿ ಸ್ಥಿತಿ ಮಾತ್ರ ಬದಲಾಗದೆ ಶೋಚನೀಯ ಸ್ಥಿತಿಯಲ್ಲಿದೆ.
ಮುಂಗಾರು ಮಳೆ ಇನ್ನು ಸರಿಯಾಗಿ ಪ್ರಾರಂಭವಾಗಿಲ್ಲದಿದ್ದರೂ, ಇತ್ತೀಚೆಗೆ ಬಿದ್ದ ಅಲ್ಪ ಪ್ರಮಾಣದ ಮಳೆಯನ್ನು ಸಹಿಸಿಕೊಳ್ಳಲು ಆಗದಂತೆ ನೋಂದಣಿ ಕಚೇರಿ ಶಿಥಿಲಗೊಂಡಿದೆ.
ಗುರುವಾರ ಬಿದ್ದ ಮಳೆಗೆ ಹೆದರಿ ಕಚೇರಿಯ ನೌಕರರು ಪರದಾಡುವಂತಾಯಿತು. ಕಚೇರಿಗೆ ಬಂದಿದ್ದ ಸಾರ್ವಜನಿಕರನ್ನು ಹೊರಗೆ ಕಳಿಸಿ, ಕುರ್ಚಿಗಳನ್ನು ಮೇಜಿನ ಮೇಲಿರಿಸಿ, ಸೂರಿನಿಂದ ಮಳೆ ಸೋರದಿರುವ ಸುರಕ್ಷಿತ ಜಾಗವನ್ನು ಹುಡುಕಿ, ಕಡತಗಳನ್ನು ಅಲ್ಲಿಗೆ ರವಾನಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದರು.
ಕಚೇರಿಯ ಸೂರಿನಿಂದ ಸೋರುವ ಮಳೆಯ ಜೊತೆಗೆ, ಮಳೆಯಿಂದ ಶಿಥಿಲಗೊಳ್ಳುವ ಗೋಡೆಗಳನ್ನು ಕಾಯಬೇಕಾಗಿದೆ. ಇಲ್ಲಿನ ಥಂಡಿಯಾದ ಗೋಡೆಗಳು ಪೂರ್ಣವಾಗಿ ಒಣಗಲು ಕನಿಷ್ಠ ಅರ್ಧದಿನವಾದರೂ ಬೇಕು. ಗೋಡೆಗಳು ಆರುವ ತನಕ ಕಚೇರಿಗೆ ಬರುವ ವಿದೇಶಿಯರು ಕಾಯುವ ಪರಿಸ್ಥಿತಿ ಉಂಟಾಗಿದೆ.
ಉಪ ಆಯುಕ್ತರ ಕಚೇರಿಯಲ್ಲಿ ಜಲಪಾತ :
ಇಲ್ಲಿನ ಹೆಚ್ಚುವರಿ ಉಪ ಆಯುಕ್ತರ ಕಚೇರಿಯ ಕೊಠಡಿ ಎಲ್ಲಕ್ಕಿಂತ ಅಧ್ವಾನವಾಗಿದೆ. ಕೊಠಡಿ ಪ್ರವೇಶಕ್ಕೆ ಮುನ್ನ ಸಾರ್ವಜನಿಕರು ತಮ್ಮ ದಿರಿಸನ್ನು ಮೊಣಕಾಲಿನವರೆಗೂ ಏರಿಸಿ ಒಳ ಪ್ರವೇಶಿಸಬೇಕು. ಕಚೇರಿ ಒಳಗಿನ ಗೋಡೆಯಿಂದ ಸುರಿಯುವ ನೀರು, ನಿಮಗೆ ಜಲಪಾತದಂತೆ ಕಂಡರೆ ಅಚ್ಚರಿಯೇನಿಲ್ಲ!
ಇದರ ನಡುವೆ ಗೋಡೆಗಳು ತಣ್ಣಗಾಗಿ, ಹಳೆ ಕಾಲದ ಸ್ವಿಚ್ ಬೋರ್ಡ್ಗಳಿಂದ ವಿದ್ಯುತ್ ಶಾರ್ಟ್ ಸರ್ಕೀಟ್ ಸಂಭವಿಸುವುದರ ಬಗ್ಗೆ ಈ ಕಚೇರಿಯ 80 ಜನ ಕೆಲಸಗಾರರು ಆತಂಕಗೊಂಡಿದ್ದಾರೆ.
ಇಲ್ಲಿನ ತೊಂದರೆಗಳ ಬಗ್ಗೆ ಉನ್ನತ ಪೊಲೀಸ್ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ‘ಇನ್ನು ಕೆಲ ತಿಂಗಳು ಸಹಿಸಿಕೊಳ್ಳಿ. ಹೊಸ ಕಟ್ಟಡದಲ್ಲಿ ಸ್ಥಳ ಸಿಕ್ಕ ನಂತರ ಇಲ್ಲಿಂದ ಕಚೇರಿಯನ್ನು ವರ್ಗಾಯಿಸೋಣ’ ಎಂಬ ಹಾರಿಕೆಯ ಉತ್ತರ ಸಿಕ್ಕಿದೆ ಎಂದು ನೊಂದಣಿ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟಿನಲ್ಲಿ ಮಳೆ ಬಂದರೆ, ಕಚೇರಿ ಕೆಲಸ ನಿಲ್ಲಿಸಿ ರಿಪೇರಿ ಕೆಲಸದಲ್ಲಿ ತೊಡುಗುವಂತಾಗಿದೆ ಇವರ ಪಾಡು.
(ದಟ್ಸ್ ಕನ್ನಡ ವಾರ್ತೆ)