ತುಮಕೂರು ಕೆಎಸ್ಸಾರ್ಟಿಸಿ ಬಸ್ಟಾಂಡ್ಗೆ ಸಿಂಗಾರ ಯೋಗ!
ಒಂದಿಷ್ಟು ಮಳೆ ಬಂದರೂ ಸಾಕು, ಅಕ್ಷರಶಃ ಕೊಳಚೆ ಗುಂಡಿಯಂತೆ ಆಗಿಬಿಡುತ್ತಿದ್ದ ಹಾಗೂ ಹಳ್ಳ-ಗುಂಡಿಗಳ ಪರಿಣಾಮ ಬಸ್ಸುಗಳು ತೂಗುಯ್ಯಾಲೆಯಂತೆ ಚಲಿಸುವಂತಾಗುತ್ತಿದ್ದ ತುಮಕೂರು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೀಗ ‘ಅಭಿವೃದ್ಧಿ ಹೊಂದುವ ಯೋಗ’ ದೊರಕಿದೆ!
ಹೌದು, ನಿಜವಾಗಿಯೂ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಅಭಿವೃದ್ಧಿ ಹೊಂದಲು ಸಜ್ಜಾಗುತ್ತಿದೆ. ಹೊಸ ರೂಪ ಪಡೆಯಲು ಸಿದ್ಧವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಸದ್ದಿಲ್ಲದೆ ಕಾಮಗಾರಿ ಆರಂಭಗೊಂಡಿದ್ದು ಭರದಿಂದ ಮುನ್ನಡೆದಿದೆ.
2 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ ಸಂಸ್ಥೆಗೆ ಸೇರಿದ ಅನೇಕ ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಆ ಪಟ್ಟಿಯಲ್ಲಿ ತುಮಕೂರು ನಗರದ ಬಸ್ ನಿಲ್ದಾಣವೂ ಸೇರಿಕೊಂಡಿದೆ. ಅದರಂತೆ ಇಲ್ಲೀಗ ಕಾಮಗಾರಿ ಆರಂಭವಾಗಿದೆ.
ಹಳ್ಳ -ಗುಂಡಿಗಳಿಂದ ಕೂಡಿದ್ದ ಈ ನಿಲ್ದಾಣದಲ್ಲಿ ಬಸ್ಗಳು ಚಲಿಸುವಾಗ ವಿಪರೀತ ಧೂಳು ಉಂಟಾಗುತ್ತಿತ್ತು. ಮಳೆ ಬಂದರಂತೂ ಕೆರೆಯಂತೆ ನೀರು ನಿಂತು ಕೊಳಚೆ ಪ್ರದೇಶದಂತೆ ಆಗುತ್ತಿತ್ತು. ನಿಲ್ದಾಣದೊಳಗೆ ಬಸ್ಸುಗಳು ತೂಗುಯ್ಯಾಲೆಯಂತೆ ಚಲಿಸಬೇಕಿತ್ತು. ಪ್ರಯಾಣಿಕರ ಪಾಲಿಗೆ ಈ ನಿಲ್ದಾಣ ನರಕಯಾತನೆ ಉಂಟು ಮಾಡುತ್ತಿತ್ತು.
ರಾಜ್ಯದ ವಿವಿಧೆಡೆಗಳಿಂದ ದಿನವೂ ಸುಮಾರು 900 ಬಸ್ಸುಗಳು ಬಂದು-ಹೋಗುವ ಹಾಗೂ ಸಾವಿರಾರು ಪ್ರಯಾಣಿಕರು ಬಂದು-ಹೋಗುವ ಈ ನಿಲ್ದಾಣದ ಸ್ಥಿತಿ ಶೋಚನೀಯವೇ ಆಗಿತ್ತು. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿ ತುಮಕೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಅಭಿವೃದ್ಧಿ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಆಗಿದೆ.
ಈ ಬಸ್ ನಿಲ್ದಾಣದ ಅಭಿವೃದ್ಧಿಯನ್ನು ಎರಡು ಕೋಟಿ ರೂ.ಗಳ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬಸ್ ನಿಲ್ದಾಣದ ಆವರಣವನ್ನು ಸಂಪೂರ್ಣವಾಗಿ ಕಾಂಕ್ರೀಟ್ ಮಾಡಲಾಗುವುದು. ಹಾಲಿ ನಿಲ್ದಾಣದಲ್ಲಿರುವ ಪ್ಲಾಟ್ ಫಾರಂನಷ್ಟು ಎತ್ತರಕ್ಕೆ ಕಾಂಕ್ರೀಟ್ ಬರಲಿದ್ದು, ಪ್ಲಾಟ್ ಫಾರಂ ಮತ್ತಷ್ಟು ಎತ್ತರಗೊಳ್ಳಲಿದೆ. ಇಲ್ಲಿ ಹಾಕಲಾಗುವ ಕಾಂಕ್ರೀಟ್ನ ಆಯಸ್ಸು ಸುಮಾರು
100 ವರ್ಷಕ್ಕೂ ಅಧಿಕ ಇರುತ್ತದೆ ಎನ್ನಲಾಗುತ್ತಿದ್ದು, ಇನ್ನು ಮುಂದೆ ಪದೇ ಪದೇ ಇದರ ನಿರ್ವಹಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜೊತೆಗೆ ಬಸ್ ನಿಲ್ದಾಣದ ಕಟ್ಟಡವನ್ನೂ ನವೀಕರಣಗೊಳಿಸಲಾಗುವುದು. ಈ ರೀತಿ ಮೇಲ್ದರ್ಜೆಗೇರುವುದರ ಜೊತೆಗೆ, ನಿಲ್ದಾಣವು ಆಕರ್ಷಕ ರೂಪವನ್ನೂ ಪಡೆಯುತ್ತದೆ. ಇದು ಈ ಅಭಿವೃದ್ಧಿ ಯೋಜನೆಯ ಗುರಿ.
9 ತಿಂಗಳಲ್ಲಿ ಪೂರ್ಣ : ‘‘ತುಮಕೂರು ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಈ ಕಾಮಗಾರಿ ಮುಂದಿನ ಸುಮಾರು 9 ತಿಂಗಳುಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ಮೈಸೂರು ಬಸ್ ನಿಲ್ದಾಣ ಅಭಿವೃದ್ಧಿಯಾಗಿರುವ ಮಾದರಿಯಲ್ಲೇ ತುಮಕೂರಿನ ಬಸ್ ನಿಲ್ದಾಣವೂ ನವೀಕರಣವಾಗಲಿದೆ’’ ಎನ್ನುತ್ತಾರೆ ತುಮಕೂರು ಕೆ.ಎಸ್.ಆರ್.ಟಿ.ಸಿ. ಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಜಿ.ಜಿ. ಹೆಗಡೆ ಅವರು.
5 ನಿಲ್ದಾಣಗಳಿಗಾಗಿ 4.60 ಕೋಟಿ ರೂ. ವೆಚ್ಚ : ತುಮಕೂರು ಜಿಲ್ಲೆಯ 5 ಬಸ್ ನಿಲ್ದಾಣಗಳು ‘ಅಭಿವೃದ್ಧಿ ಯೋಗ’ ಹೊಂದಿವೆ. ತುಮಕೂರು ನಿಲ್ದಾಣವು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಗುಬ್ಬಿ ನಿಲ್ದಾಣವು 50 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಕುಣಿಗಲ್ ನಿಲ್ದಾಣವು 60 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಕಾಂಕ್ರೀಟ್ನಿಂದ ಸಜ್ಜುಗೊಂಡಿವೆ.
ತಿಪಟೂರಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಕಾಮಗಾರಿ ಇನ್ನೆರಡು ತಿಂಗಳುಗಳಲ್ಲಿ ಪೂರ್ಣಗೊಳ್ಳುವ ಹಾಗೂ ಶಿರಾ ಬಸ್ ನಿಲ್ದಾಣದಲ್ಲಿ 50 ಲಕ್ಷದಲ್ಲಿ ಕೈಗೊಂಡಿರುವ ಕಾಂಕ್ರೀಟ್ ಕಾಮಗಾರಿ ಇನ್ನು 4 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಹೀಗೆ ಜಿಲ್ಲೆಯ 5 ಬಸ್ ನಿಲ್ದಾಣಗಳ ಅಭಿವೃದ್ಧಿಗಾಗಿ ಕೆ.ಎಸ್. ಆರ್.ಟಿ.ಸಿ.ಯು ಒಟ್ಟು 4.60 ಕೋಟಿ ರೂ.ಗಳನ್ನು ವಿನಿಯೋಗಿಸಿದೆ.












Click it and Unblock the Notifications