ಮಾರ್ಚ್ 31ರಂದು ಕಾಸರಗೋಡಿನಲ್ಲಿ ಕನ್ನಡ ಸಮ್ಮೇಳನ
ಮಂಗಳೂರು : ಕಾಸರಗೋಡು ಜಿಲ್ಲೆ ಚಿಪ್ಪಾರು ಎಂಬಲ್ಲಿ ಮಾ.31ರಂದು ‘ಕಾಸರಗೋಡು ಕನ್ನಡ ಜಾಗೃತಿ ಸಮ್ಮೇಳನ’ ನಡೆಯಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಸಮ್ಮೇಳನವನ್ನು ಆಯೋಜಿಸಿದೆ. ಈ ಬಗ್ಗೆ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಧಿಕಾರದ ಸದಸ್ಯ ಎಸ್.ಪ್ರದೀಪ್ಕುಮಾರ್ ಕಲ್ಕೂರ, ಗಡಿಜಿಲ್ಲೆಯಲ್ಲಿನ ಕನ್ನಡಿಗರನ್ನು ಬೆಂಬಲಿಸಲು, ಕನ್ನಡ ಜಾಗೃತಿ ಮೂಡಿಸಲು, ಕನ್ನಡಿಗರ ಸಮಸ್ಯೆ ಚರ್ಚಿಸಲು ಹಾಗೂ ಸಾಧಕರನ್ನು ಗೌರವಿಸುವ ನಿಟ್ಟಿನಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದರು.
ಸಂಕಿರಣದಲ್ಲಿ ಡಾ.ಸುಂದರ್ ಕೆಣಾಜೆ ಮತ್ತು ಡಾ.ಕೆ.ಸುಬ್ರಹ್ಮಣ್ಯ ‘ಗಡಿಕನ್ನಡಿಗರ ಹಕ್ಕುಗಳು ಮತ್ತು ಸೌಲಭ್ಯಗಳ ಕುರಿತು ಗಡಿಕನ್ನಡಿಗರ ಜಾಗೃತಿ’ ಮತ್ತು ‘ಸಾಂಸ್ಕೃತಿಕ ದಾಳಿ ಹಾಗೂ ಪ್ರತಿರೋಧ’ ಎಂಬ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಸಮಾರಂಭದ ಅಂಗವಾಗಿ ಕವಿಗೋಷ್ಠಿ ಹಾಗೂ ಹಾಸ್ಯೋತ್ಸವ ಕೂಡ ನಡೆಯಲಿವೆ. ಭದ್ರಗಿರಿ ಅಚ್ಯುತದಾಸ ಹರಿಕಥೆ ನಡೆಸಿಕೊಡಲಿದ್ದಾರೆ.
ಚಿಪ್ಪಾರುನ ಶ್ರೀ ವಿಷ್ಣುಮೂರ್ತಿ ದೇವಾಲಯದ ಆವರಣದಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಗಡಿನಾಡು ಘಟಕದ ಮುಖ್ಯಸ್ಥ ಐ.ವಿ.ಭಟ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಕಲ್ಕೂರ ವಿವರಿಸಿದರು.
ಗಡಿ ಉತ್ಸವ : ಇನ್ನೊಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್ಕುಮಾರ್ ಕಲ್ಕೂರ, ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ‘ಗಡಿ ಸಾಂಸ್ಕೃತಿಕ ಉತ್ಸವ’ ನಡೆಯಲಿದೆ ಎಂದು ತಿಳಿಸಿದರು.
ತುಳು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಸಹಯೋಗದೊಂದಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಈ ಉತ್ಸವ ನಡೆಸುತ್ತಿವೆ. ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಹಾರ ಮೇಳ ನಡೆಯಲಿವೆ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)