ವಿಶ್ವಕಪ್ : ಶ್ರೀಲಂಕಾ ಮಣಿಸಿದರೆ, ಭಾರತಕ್ಕೆ ಉಳಿಗಾಲ!
ಪೋರ್ಟ್ ಆಫ್ ಸ್ಪೇನ್ : ಭಾರತ ತಂಡ ವಿಶ್ವಕಪ್ ಕ್ರಿಕೆಟ್ನ ಸೂಪರ್-8 ಹಂತಕ್ಕೆ ತಲುಪಬೇಕಾದರೆ, ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಇಳಿಸಂಜೆ ಆರಂಭಗೊಳ್ಳುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕು!
‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಬರ್ಮುಡಾ ಹಾಗೂ ಭಾರತ ತಂಡಗಳಿವೆ. ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲಿ, ಬಾಂಗ್ಲಾದೇಶದ ವಿರುದ್ಧ ದಯನೀಯ ಸೋಲು ಅನುಭವಿಸಿತ್ತು. ಆನಂತರ ಬರ್ಮುಡಾ ವಿರುದ್ಧ ವಿಶ್ವಕಪ್ನಲ್ಲೇ ಅತ್ಯಧಿಕ ಮೊತ್ತ ದಾಖಲಿಸಿ ಗೆಲುವು ಸಾಧಿಸಿತ್ತು.
ಸೂಪರ್-8 ಹಂತಕ್ಕೆ ತಲುಪಬೇಕಾದರೆ ಶ್ರೀಲಂಕಾ ತಂಡವನ್ನು ಸೋಲಿಸಬೇಕು. ಇಲ್ಲದಿದ್ದರೆ ಬಂದ ದಾರಿಗೆ ಸುಂಕವಿಲ್ಲವೆಂದು ಸ್ವದೇಶಕ್ಕೆ ಮರಳಬೇಕಾಗುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಶುಕ್ರವಾರದ ಪಂದ್ಯಕ್ಕೆ ಭಾರೀ ಮಹತ್ವ.
ಪಂದ್ಯಾವಳಿಯ ಅತ್ಯಂತ ಫೇವರಿಟ್ ತಂಡಗಳ ಪೈಕಿ ಒಂದು ಎಂದು ಪರಿಗಣಿತವಾಗಿದ್ದ ಪಾಕಿಸ್ತಾನ ಲೀಗ್ ಹಂತದಲ್ಲೇ ನಿರ್ಗಮಿಸಿದ್ದು, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತ ತಂಡ ಇದೇ ಹಾದಿ ಹಿಡಿಯದಿರಲಿ ಎಂಬುದು ಅಭಿಮಾನಿಗಳ ಹಾರೈಕೆ.
ಭಾರತ ಸೂಪರ್-8 ಹಂತಕ್ಕೆ ತಲುಪಬೇಕಾದರೆ ಏನೆಲ್ಲಾ ಸಂಭವಿಸಬೇಕೆಂಬ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ. ಆದರೆ ಶ್ರೀಲಂಕಾ ವಿರುದ್ಧ ಗೆದ್ದರೆ ಮಾತ್ರ ಇದು ಸುಸೂತ್ರ. ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿದರೆ ಸೂಪರ್-8 ಹಂತದ ಹಾದಿ ಅಸಾಧ್ಯವೇನಲ್ಲ ಎಂಬುದು ಕೋಟ್ಯಂತರ ಅಭಿಮಾನಿಗಳ ನಂಬಿಕೆ ಅಥವಾ ಹಾರೈಕೆ.
ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದು ಎರಡನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದು ಮೂರನೇ ಸ್ಥಾನದಲ್ಲಿದೆ. ಬರ್ಮುಡಾ ಎರಡೂ ಪಂದ್ಯಗಳನ್ನು ಸೋತಿದೆ.
(ಏಜನ್ಸೀಸ್)











Click it and Unblock the Notifications