ಸದ್ದಾಂ ವಿರುದ್ಧ ಇನ್ನೊಂದು ಕೇಸು : 2ನೇ ಸಲ ಗಲ್ಲು?
ಬಾಗ್ದಾದ್ : ಎರಡು(ನವೆಂಬರ್ 5) ದಿನಗಳ ಹಿಂದಷ್ಟೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಇರಾಕ್ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಮಂಗಳವಾರ ಮತ್ತೆ ಕೋರ್ಟ್ನಲ್ಲಿ ಹಾಜರಾದ. ಈ ಪ್ರಕರಣದಲ್ಲಿ ಆತ ದೋಷಿಯಾದರೆ, ಕೋರ್ಟ್ ಏನು ಶಿಕ್ಷೆ ವಿಧಿಸುತ್ತದೆಯೋ ಗೊತ್ತಿಲ್ಲ!
1980ರ ದಶಕದ ಕೊನೆಯಲ್ಲಿ ಕುರ್ದ್ ಜನಾಂಗದ ನರಮೇಧ ನಡೆಸಿದ ಆರೋಪ ಎದುರಿಸುತ್ತಿರುವ ಸದ್ದಾಂ, ಈ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ಪುನಃ ಪ್ರತ್ಯಕ್ಷವಾಗಬೇಕಾಯಿತು.
1988ರಲ್ಲಿ ನಡೆದ ಅನ್ಫಲ್ ಮಿಲಿಟರಿ ದಾಳಿಯಲ್ಲಿ ಸದ್ದಾಂ ಹಾಗೂ ಆತನ ಆರು ಮಂದಿ ಸಹಚರರ ಕೈವಾಡವಿದೆ. ಈ ನರಮೇಧದಲ್ಲಿ ಸುಮಾರು 180,000 ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ವಕೀಲರು ವಾದಿಸಿದರು.
ಸದ್ದಾಂಗೆ ಗಲ್ಲೇಕೆ? : 1982ರಲ್ಲಿ ತಮ್ಮ ವಿರುದ್ಧ ನಡೆದ ಹತ್ಯೆ ಯತ್ನದಿಂದ ಕ್ರುದ್ಧರಾದ ಸದ್ದಾಂ, ದುಜೈಲ್ ಪಟ್ಟಣದಲ್ಲಿನ ನೂರಾರು ಶಿಯಾ ಪಂಗಡದವರನ್ನು ಕೊಲ್ಲಲು-ಚಿತ್ರಹಿಂಸೆ ನೀಡಲು ಆದೇಶಿಸಿದ್ದರು. ಇದು ಮಾನವೀಯತೆ ವಿರುದ್ಧ ಎಸಗಿದ ಅಪರಾಧ ಎಂದು ಹೇಳಿದ್ದ ನ್ಯಾಯಾಲಯ, ಸದ್ದಾಂ ಸೇರಿದಂತೆ ಅವರ ಇಬ್ಬರು ಸಹಚರರಿಗೆ ನ.5ರಂದು ಮರಣದಂಡನೆ ತೀರ್ಪು ನೀಡಿತ್ತು.
ಕೋರ್ಟ್ನಲ್ಲಿ ತೀರ್ಪು ಪ್ರಕಟವಾದಾಗ, ವಿಚಲಿತರಾದಂತೆ ಸದ್ದಾಂ ಕಂಡು ಬಂದ. ಆವೇಶದಿಂದ ಕೈಬೀಸಿದ. ಅಲ್ಲಾಹು ಅಕ್ಬರ್(ದೇವರು ದೊಡ್ಡವನು) ಎಂದ. ಇರಾಕ್ ಚಿರಾಯುವಾಗಲಿ ಎಂದು ಗುಡುಗಿದ್ದು ಇಲ್ಲಿ ಉಲ್ಲೇಖನೀಯ.
(ಯುಎನ್ಐ)