ಬಿಎಂಟಿಸಿ ಬಾಗಿಲು ತೆಗೆಯೋ ಡ್ರೆೃವರಪ್ಪ ; ಉಹುಂ, ಅದಾತನ ಕೈಲಿಲ್ಲ!
ಬೆಂಗಳೂರು : ಇನ್ನು ಮುಂದೆ ಚಲಿಸುವ ಬಸ್ಗಳಿಂದ ಎಲ್ಲೆಂದರಲ್ಲಿ ಪ್ರಯಾಣಿಕರು ಜಿಗಿಯಲು ಸಾಧ್ಯವಾಗದು. 'ಬಾಗಿಲು ತೆಗೆಯೋ ಡ್ರೆೃವರಪ್ಪ" ಎಂದು ಬಸ್ ಚಾಲಕನ ಬೇಡಿದರೂ ಫಲವಿಲ್ಲ. ಕಾರಣ ಅದವನ ಕೈಯಲ್ಲಿಲ್ಲ. ಬಸ್ ನಿಲ್ಲದ ಹೊರತು ಬಾಗಿಲು ಬಾಯಿ ಬಡಿದುಕೊಂಡರೂ ತೆರೆದುಕೊಳ್ಳುವುದಿಲ್ಲ!
ಹೊಸ ತಂತ್ರಜ್ಞಾನದ ಸುರಕ್ಷಿತ ಬಾಗಿಲುಗಳನ್ನು ನಗರ ಸಾರಿಗೆಯ ಬಸ್ಗಳಿಗೆ ಅಳವಡಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ನಿರ್ಧರಿಸಿದೆ.
ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುವ ಬಸ್ಗಳಿಂದ ಇಳಿಯಲು ಹಾಗೂ ಹತ್ತಲು ಹೋಗಿ ಕೆಳಕ್ಕೆ ಉರುಳಿ ಅಪಘಾತ ಸಂಭವಿಸಿದ ಪ್ರಕರಣಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಸುರಕ್ಷಿತ ಬಾಗಿಲುಗಳು ಪರಿಣಾಮಕಾರಿ. ಇನ್ನು ವಾರದೊಳಗೆ ಸುಮಾರು 2500 ಬಿಎಂಟಿಸಿ ಮತ್ತು 1000 ಖಾಸಗಿ ಬಸ್ಗಳು ಈ ಸುರಕ್ಷಿತ ಬಾಗಿಲನ್ನು ಹೊಂದಲಿವೆ.
ಹೊಸ ಬಾಗಿಲುಗಳು ವಿಶಿಷ್ಟ ಲಾಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ತಂತ್ರಜ್ಞಾನವನ್ನು ಹೊಂದಿದೆ. ಬಸ್ನ ಎಂಜಿನ್ ನಿಂತ ತಕ್ಷಣ ಬಾಗಿಲು ತೆರೆಯಲಿದೆ. ಎಂಜಿನ್ ಕಾರ್ಯ ಆರಂಭಿಸಿದಾಗ ಬಾಗಿಲು ತೆರೆಯಲು ಸಾಧ್ಯವಾಗುವುದಿಲ್ಲ. ಅಂದರೆ ಚಲಿಸುವ ಬಸ್ನ ಬಾಗಿಲನ್ನು ಯಾವುದೇ ಕಾರಣಕ್ಕೂ ತೆರೆಯುವುದು ಅಸಾಧ್ಯ. ರಾಷ್ಟ್ರದಲ್ಲಿಯೇ ಹೊಸ ತಂತ್ರಜ್ಞಾನದ ಸುರಕ್ಷಿತ ಬಾಗಿಲನ್ನು ಹೊಂದುತ್ತಿರುವ ಪ್ರಪ್ರಥಮ ನಗರ ಎನ್ನುವ ಪ್ರಖ್ಯಾತಿಗೆ ಬೆಂಗಳೂರು ಪಾತ್ರವಾಗಲಿದೆ.
ಸಂಪೂರ್ಣ ಸುರಕ್ಷಿತವಾಗಿರುವ ಈ ಬಾಗಿಲುಗಳು ಮಾತಾಡುತ್ತವೆ! ಬಾಗಿಲು ತೆರೆದುಕೊಳ್ಳುವಾಗ ಮತ್ತು ಮುಚ್ಚುವಾಗ ಪ್ರಯಾಣಿಕರಿಗೆ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಎಚ್ಚರಿಕೆ ನೀಡುವುದು ಮತ್ತೊಂದು ವಿಶೇಷ. ಒಂದು ಸುರಕ್ಷಿತ ಬಾಗಿಲನ್ನು ಅಳವಡಿಸಲು 15 ಸಾವಿರ ರೂ. ವೆಚ್ಚವಾಗಲಿದೆ.