ಇತಿಹಾಸ ‘ಸೃಷ್ಟಿ’ ! ಮಂಗಳೂರು ಬಾಲೆ ಓಲೆಗೆ ಮುಷರ್ರಫ್ ಬೋಲ್ಡ್
ಇತಿಹಾಸ 'ಸೃಷ್ಟಿ' ! ಮಂಗಳೂರು ಬಾಲೆ ಓಲೆಗೆ ಮುಷರ್ರಫ್ ಬೋಲ್ಡ್ ಸಿಪಾಯಿ ಗುಂಡಿಗೆಯ ಪಾಕ್ ಅಧ್ಯಕ್ಷ ರ ಹೃದಯ ನಾಟಿದ ಭಾರತೀಯ ವಿದ್ಯಾರ್ಥಿನಿ ಕವನ
ಮಂಗಳೂರು : ಇಲ್ಲಿನ ಹದಿನೈದರ ಹರೆಯದ ಹುಡುಗಿಯಾಬ್ಬಳು ಬರೆದ ಪತ್ರ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಪ್ ಅವರನ್ನು ವಿಚಲಿತರನ್ನಾಗಿಸಿದೆ. ಹೃದಯಸ್ಪರ್ಶಿ ಪತ್ರಕ್ಕೆ ಭಾವನಾತ್ಮಕವಾಗಿ ಸ್ಪಂದಿಸಿರುವ ಮುಷರ್ರಫ್- ಬಾಲಕಿಯ ಕನಸಾಗಿರುವ ಎರಡು ದೇಶಗಳ ನಡುವಿನ ಬಾಂಧವ್ಯ ಅಭಿವೃದ್ಧಿಯನ್ನು ನನಸು ಮಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಪಾಕ್ ಅಧ್ಯಕ್ಷ ಹಾಗೂ ಶಿಸ್ತಿನ ಸಿಪಾಯಿ ಮುಷರ್ರಫ್ರ ಹೃದಯ ಸೂರೆಗೊಂಡ ಹುಡುಗಿ ಸೃಷ್ಟಿ , ಸೃಷ್ಟಿ ಕೃಷ್ಣಮೂರ್ತಿ!
ಸೃಷ್ಟಿ ಮಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿನಿ. ಆಕೆಯ ತಂದೆ ಕೃಷ್ಣ ಮೂರ್ತಿ ಕಾಲೇಜು ಪ್ರಾಂಶುಪಾಲರು. ಮಗಳ ಪತ್ರ ಪಾಕ್ ಅಧ್ಯಕ್ಷರ ಮೇಲೆ ಬೀರಿರುವ ಪರಿಣಾಮದ ಕುರಿತು ಕೃಷ್ಣಮೂರ್ತಿಯವರಿಗೆ ಅಪಾರ ಹೆಮ್ಮೆ , ಮಗಳ ಕುರಿತು ಮೆಚ್ಚುಗೆ.
ಸೃಷ್ಟಿ ತನ್ನ ಪತ್ರದಲ್ಲಿ ಮುಷರ್ರಫ್ರಿಗೆ ಕವಿತೆಯ ಮೂಲಕ ಸಂದೇಶ ಕಳುಹಿಸಿದ್ದಳು. ಕವಿತೆಯ ಶೀರ್ಷಿಕೆ 'ಆಂತರಿಕ ಅವಲಂಬನೆ' (Symbiosis). ಉಭಯ ದೇಶಗಳ ಸಾಂಗತ್ಯವು ಆಟವನ್ನು ಮೀರಿ ಬೆಳೆಯಬೇಕಿದೆ ಎಂದು ನಾನು ಪತ್ರದಲ್ಲಿ ಬರೆದಿದ್ದೆ. ಆದರೆ, ಬರೆದ ಪತ್ರಕ್ಕೆ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ಮುಷರ್ರಫ್ರ ಅನಿರೀಕ್ಷಿತ ಉತ್ತರದಿಂದ ತುಂಬಾ ಉತ್ಸುಕಗೊಂಡಿದ್ದೇನೆ. ಎಷ್ಟಾದರೂ ನಾವೆಲ್ಲರೂ ಒಂದೇ ಅಲ್ಲವೇ ಎನ್ನುತ್ತಾಳೆ ಸೃಷ್ಟಿ .
ಮುಷರ್ರಫ್ ತಮ್ಮ ಪತ್ರದಲ್ಲಿ ಸೃಷ್ಟಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ. ಆಕೆಯ ಆಶಯವನ್ನು ಸಾಕಾರಗೊಳಿಸಲು ಶ್ರಮಿಸುವುದಾಗಿ ಹೇಳಿದ್ದಾರೆ. ಸಹೃದಯ ಬಾಲಕಿಗೆ ಉತ್ತಮ ಭವಿಷ್ಯವನ್ನೂ ಹಾರೈಸಿದ್ದಾರೆ.
ಅಂದಹಾಗೆ, ಸೃಷ್ಟಿಗೆ ಕವಿತೆ ಬರೆಯುವುದು ಹೊಸತೇನೂ ಅಲ್ಲ . ಈ ಹಿಂದೆ ಐದು ಅಂತರಾಷ್ಟ್ರೀಯ ಸಾಹಿತ್ಯ-ಕವನ ಸಮಾವೇಶಗಳಲ್ಲಿ ಆಕೆ ಭಾರತವನ್ನು ಪ್ರತಿನಿಧಿಸಿದ್ದಾಳೆ. ಮಗಳ ಕುರಿತು ಹೇಳಿಕೊಳ್ಳುವಾಗ, ಕೃಷ್ಣಮೂರ್ತಿ ಕಣ್ಣುಗಳಲ್ಲಿ ಮಿಂಚುಗೊಂಚಲು.(ಪಿಟಿಐ)












Click it and Unblock the Notifications